ಹುಬ್ಬಳ್ಳಿ : ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ವಿಜಯ ಯಾತ್ರೆ ಏ. 13ರಂದು ನಗರಕ್ಕೆ ಆಗಮಿಸಲಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಕನ್ನಡ ವೈಶ್ಯ ಸಮಾಜದ ಪ್ರಮುಖರಾದ ಗೋವಿಂದ ಶೆಟ್ಟಿ, ಆರು ವರ್ಷಗಳ ನಂತರ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ ಎಂದರು.
ಅಂದು ಸಂಜೆ 5 ಗಂಟೆಗೆ ಹೊಸೂರು ಬಿಆರ್ಟಿಎಸ್ ಬಸ್ ನಿಲ್ದಾಣದಿಂದ ಶ್ರೀ ಶಂಕರ ಸದನ ಮಂಗಲ ಕಾರ್ಯಾಲಯದವರೆಗೆ ಪೂರ್ಣಕುಂಭದ ಶೋಭಾಯಾತ್ರೆ ಮೂಲಕ ಶ್ರೀಗಳನ್ನು ಸ್ವಾಗತಿಸಲಾಗುವುದು. ನಂತರ ಪಾದಪೂಜೆ, ಭಿನ್ನವತ್ತಳೆ ಸಮರ್ಪಣೆ, ಶ್ರೀಗಳಿಂದ ಆಶೀರ್ವಚನ ನಡೆಯಲಿದೆ. 13ರಿಂದ 15ರವರೆಗೆ ಶ್ರೀಗಳು ಹುಬ್ಬಳ್ಳಿಯಲ್ಲಿಯೇ ಇರುವರು ಎಂದು ತಿಳಿಸಿದರು.
14ರಂದು ಬೆಳಗ್ಗೆ 10.30ರಿಂದ ಭಿಕ್ಷಾ ವಂದನೆ, ವಸ್ತ್ರ ಸಮರ್ಪಣೆ, ಪಾದಪೂಜೆ, ರಾತ್ರಿ ಶ್ರೀ ಚಂದ್ರಮೌಳೇಶ್ವರ ಪೂಜೆ, 15ರಂದು ವಿವಿಧ ಧಾರ್ವಿುಕ ಕಾರ್ಯಕ್ರಮ ನಡೆಯಲಿವೆ. 14 ಮತ್ತು 15ರಂದು ಮಧ್ಯಾಹ್ನ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ಕಾರ್ಯಕ್ರಮದ ನಂತರ ಶ್ರೀಗಳು ತಡಸ ಗಾಯತ್ರಿಮಠ ಹಾಗೂ ಪಾಲಿಕೊಪ್ಪಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.
ಸತೀಶ ಕಲಮನೆ, ಉಮೇಶ ಶಾಂಭಾಶೆಟ್ಟಿ, ರಾಜೇಂದ್ರ ಮಧುಕರ ಶೆಟ್ಟಿ, ಡಾ. ಸುಭಾಷ ಬಬ್ರುವಾಡ ಸುದ್ದಿಗೋಷ್ಠಿಯಲ್ಲಿ ಇದ್ದರು.