ಹುಬ್ಬಳ್ಳಿ: ನಾಡಿನ ಪ್ರಸಿದ್ಧ ವಿದ್ವಾಂಸ ಕಂಠಪಲ್ಲೀ ಸಮೀರಾಚಾರ್ಯ ಅವರ ಇಂಗ್ಲಿಷ್ ಅನುವಾದಿತ ಕೃತಿ ‘ದಿ ಇಂಟ್ರಿನ್ಸಿಕ್ ವ್ಯಾಲ್ಯೂ ಆಫ್ ಶ್ರೀಮದ್ಭಾಗವತ’ ಸೋಮವಾರ ನವದೆಹಲಿಯಲ್ಲಿ ಲೋಕಾರ್ಪಣೆಗೊಂಡಿತು.
ಹೆಸರಾಂತ ಆಧ್ಯಾತ್ಮಿಕ ಉಪನ್ಯಾಸಕರಾಗಿರುವ ಸಮೀರಾಚಾರ್ಯರು ಕನ್ನಡದಲ್ಲಿ ಅನೇಕ ಆಧ್ಯಾತ್ಮಿಕ ಕೃತಿಗಳನ್ನು ರಚಿಸಿದ್ದಾರೆ. ಈಗ ಭಾಷಾಂತರ ಅವತರಣಿಕೆಯ ಮೂಲಕ ಇಂಗ್ಲಿಷ್ ಓದುಗರನ್ನೂ ತಲುಪಿದ್ದಾರೆ. ‘ಶ್ರೀಮದ್ಭಾಗವತ ಆಂತರಿಕ ಕಥಾ ಮೌಲ್ಯಗಳು’ ಎಂಬುದು ಸಮೀರಾಚಾರ್ಯರ ಸುಪ್ರಸಿದ್ಧ ಕೃತಿ. ಈ ಕೃತಿಯನ್ನು ಗಾಯತ್ರಿ ಮಧುಸೂದನ ಅವರು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ. ಇಂಗ್ಲಿಷ್ ಅವರಣಿಕೆಯ ಈ ಪುಸ್ತಕ The Intrinsic value of Shrimadbhagavata ಈಗ ಓದುಗರಿಗೆ ಲಭ್ಯವಾಗುತ್ತಿದೆ. ನವದೆಹಲಿಯ ‘ಹೆರಿಟೇಜ್ ಪೊ›ಮೊಟಿಂಗ್’ ಎಂಬ ಸುಪ್ರಸಿದ್ಧ ಸಂಸ್ಥೆ ಈ ಪುಸ್ತಕವನ್ನು ಹೊರತಂದಿದೆ. ಅಮೆಜಾನ್ ಜಾಲತಾಣದಲ್ಲಿಯೂ (amazon.in; amazon.com) ಮಾರಾಟಕ್ಕೆ ಲಭ್ಯವಿದೆ.
ಹಿರಿಯ ನ್ಯಾಯವಾದಿ ಹಾಗೂ ಕೇಂದ್ರದ ಮಾಜಿ ಸಚಿವ ದಿ.ರಾಮ್ ಜೇಠ್ಮಲಾನಿ ಅವರ ಕಾರ್ಯದರ್ಶಿಗಳಾಗಿದ್ದ ಕೆ.ಎಸ್.ಚಾರಿ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಆನಂದ ಸಂಕೇಶ್ವರ ಅವರು ಶುಭನುಡಿ ಕೋರಿದ್ದಾರೆ. ದೇಶದ ಪ್ರಗತಿಗೆ ಪೂರಕವಾಗುವಂತಹ ವಿಚಾರಗಳು, ಮಾನವ ಕುಲ ಅದರಲ್ಲೂ ವಿಶೇಷವಾಗಿ ಯುವಕರು ನೈತಿಕತೆಯ ಹಾದಿಯಲ್ಲಿ ಸಾಗಲು ಪ್ರೇರೇಪಿಸುವಂತಹ ಮೌಲ್ಯಾಧಾರಿತ ಕಥೆಗಳು ಭಾಗವತ ಪುರಾಣದ ಅನೇಕ ವ್ಯಕ್ತಿಗಳ ವ್ಯಕ್ತಿತ್ವದ ರೂಪದಲ್ಲಿ ಈ ಪುಸ್ತಕದಲ್ಲಿ ಅಡಕವಾಗಿವೆ.
ಸರಳಾತಿಸರಳರೂಪದಲ್ಲಿ ಭಾಗವತದ ಎಲ್ಲ ಸ್ಕಂದಗಳ ವಿಶೇಷಣ ರೂಪ ವಿಶ್ಲೇಷಣೆ ಈ ಪುಸ್ತಕದಲ್ಲಿ ಅಮೂರ್ತವಾಗಿ ದೊರೆಯುತ್ತದೆ. ಪ್ರಹ್ಲಾದ, ಧ್ರುವ, ಅಂಬರೀಷ, ಶ್ರೀಕೃಷ್ಣ ಪರಮಾತ್ಮ ಇತ್ಯಾದಿ ಪಾತ್ರಗಳ ಮೂಲಕ ಸತ್ಯ, ನ್ಯಾಯ, ವಿನಯ, ಔದಾರ್ಯ, ಪ್ರಜ್ಞಾವಂತಿಕೆ, ಮನುಷ್ಯತ್ವ ಮೊದಲಾದ ಸದ್ಗುಣಗಳ ಅದ್ಭುತವಾದ ದರ್ಶನ ಇಲ್ಲಿದೆ. ಆಧ್ಯಾತ್ಮಪ್ರಿಯರು ಮಾತ್ರವಲ್ಲದೆ, ಪ್ರಗತಿಪರರಿಗೂ, ಯುವಜನತೆಗೂ ಈ ಪುಸ್ತಕ ಇಷ್ಟವಾಗುತ್ತದೆ ಎಂಬ ವಿಶ್ವಾಸ ಲೇಖಕರದ್ದಾಗಿದೆ.
ಭಾಗವತ ಕುರಿತ ವಿದ್ವತ್ಪೂರ್ಣ ಪ್ರವಚನ ಹಾಗೂ ವ್ಯಾಖ್ಯಾನದಲ್ಲಿ ಸುಮಾರು ಎರಡು ದಶಕಗಳ ಅನುಭವ ಇರುವ ಕಂಠಪಲ್ಲೀ ಸಮೀರಾಚಾರ್ಯ ಅವರು ಭಾಗವತ ಕುರಿತ ಜ್ಞಾನ ಸಾಗರವನ್ನು ಈ ಪುಸ್ತಕದಲ್ಲಿ ಮಂಥನ ಮಾಡುವ ಮೂಲಕ ಆಧ್ಯಾತ್ಮದ ಅಮೃತವನ್ನು ಉಣಬಡಿಸಿದ್ದಾರೆ.
| ಆನಂದ ಸಂಕೇಶ್ವರ ಎಂಡಿ, ವಿಆರ್ಎಲ್ ಸಮೂಹ ಸಂಸ್ಥೆಗಳು