ಶ್ರೀಕೃಷ್ಣಪರಮಾತ್ಮನ ರಥವು ವಾಯುವೇಗದಿಂದ ಹೊರಟಿದೆ. ಅಕ್ರೂರ ಸಾರಥಿಯಾಗಿ ರಥವನ್ನು ವೇಗದಿಂದ ತೆಗೆದುಕೊಂಡು ಹೋಗುತ್ತಿದ್ದಾನೆ. ಮಧ್ಯಾಹ್ನದ ಸಮಯ. ತಕ್ಷಣ ರಥವನ್ನು ಪಕ್ಕಕ್ಕೆ ನಿಲ್ಲಿಸಿದ್ದಾನೆ. ನೀರಡಿಕೆಯೋ ಹಸಿವೆಯೋ ಆಗಿತ್ತು ಎಂಬ ಕಾರಣಕ್ಕಲ್ಲ. ಮಧ್ಯಾಹ್ನ ಸಂಧ್ಯಾವಂದನೆಯ ಸಮಯ ಆಗಿದೆ.‘ಅಹರಹಃ ಸಂಧ್ಯಾಮುಪಾ ಸೀತ್’ ಎಂದು ಶ್ರುತಿಯು ಹೇಳಿದಂತೆ ಮಧ್ಯಾಹ್ನ ಹನ್ನೆರಡು ಘಂಟೆಗೆ ಮಧ್ಯಾಹ್ನದ ಸಂಧ್ಯಾವಂದನೆ ಮಾಡಬೇಕು ಎಂಬ ಕಾರಣಕ್ಕೆ.
ವಾದಿರಾಜ ಗುರುಸಾರ್ವಭೌಮರು ಹೇಳುತ್ತಾರೆ: ಅಕ್ರೂರ ಮಧ್ಯಾಹ್ನ ಹನ್ನೆರಡು ಘಂಟೆಗೆ ತನ್ನ ರಥವನ್ನು ನಿಲ್ಲಿಸುವ ಮೂಲಕ ಒಂದು ಸಂದೇಶವನ್ನು ನೀಡುತ್ತಿದ್ದಾನೆ. ಸ್ವತಃ ದೇವರನ್ನು ತನ್ನ ರಥದೊಳಗೆ ಕೂಡಿಸಿಕೊಂಡು ಹೊರಟಾಗ ತನ್ನ ಎದುರಿಗೆ ದೇವರಿದ್ದರೂ ನಿತ್ಯ ಕರ್ಮಗಳನ್ನು ತಪ್ಪದೇ ಮಾಡಬೇಕು. ನಿತ್ಯಕರ್ಮಗಳನ್ನು ಬಿಡುವಂತಿಲ್ಲ.’ ಎಂದು.
ಇವತ್ತಿನ ಕಾಲದಲ್ಲಿ ಕೆಲವರು ಹೀಗೆ ಹೇಳುವುದುಂಟು: ‘ನಮ್ಮ ಅಪ್ಪ ಅಜ್ಜ ಬಹಳ ಧರ್ಮಮಾಡಿದ್ದಾರೆ. ನಾವು ಸಂಧ್ಯಾವಂದನೆ ಮಾಡುವಅಗತ್ಯ ಇದೆಯಾ ? ದೊಡ್ಡವರು ಮಾಡಿದ ಮೇಲೆ ನಾವು ಮಾಡಿದರೆಷ್ಟು ಬಿಟ್ಟರೆಷ್ಟು’ ಎಂದು ಭಾವಿಸಿ ಸಂಧ್ಯಾವಂದನೆ ಮಾಡುವುದನ್ನು ಬಿಟ್ಟು ಬಿಡುತ್ತಾರೆ. ಅದೆಲ್ಲ ನಡೆಯುವುದಿಲ್ಲ. ನಿಮ್ಮ ಅಜ್ಜ ಅಪ್ಪ ಮಾಡಿದರೆ ಅದರ ಪುಣ್ಯ ಅವರಿಗೆ ಹೋಗುತ್ತದೆ. ನೀನು ಮಾಡಬೇಕು.
ಅತೀತಾನಾಗತಜ್ಞಾನೀ ತ್ರೖೆಲೋಕ್ಯೋದ್ಧರಣಕ್ಷಮಾಃಏತಾದೃಶೋಪಿ ನಾಚಾರಂ ಶ್ರೌತಂ ಸ್ಮಾರ್ತಂ ಪರಿತ್ಯಜೇತ್- ತ್ರಿಕಾಲಜ್ಞಾನಿಯಾಗಿ ಮೂರು ಲೋಕಗಳನ್ನು ಉದ್ಧಾರ ಮಾಡುವ ಸಾಮರ್ಥ್ಯ ಇದ್ದರೂ ಮಹಾಭಾರತ ಭಾಗವತದಲ್ಲಿ ಹೇಳಿದ ಧರ್ಮಗಳನ್ನು ವೇದಶಾಸ್ತ್ರಗಳಲ್ಲಿ ಹೇಳಿದ ಸಂಧ್ಯಾದಿ ಸತ್ಕರ್ಮಗಳನ್ನು ತಪ್ಪದೇ ಮಾಡಬೇಕು.
ಶ್ರೌತಸ್ಮಾರ್ತಕರ್ಮಗಳನ್ನು ಬಿಡುವಂತಿಲ್ಲ. ಹೀಗಾಗಿ ದೇವರನ್ನು ರಥದಲ್ಲಿಯೇ ಕೂಡಿಸಿ ಅಕ್ರೂರ ತಾನು ಸಂಧ್ಯಾವಂದನೆಗೆ ತೆರಳಿದ್ದಾನೆ. ದೇವರ ಪ್ರೀತಿಗೆ ಮಾಡಬೇಕಾದ ಸಂಧ್ಯಾವಂದನೆ ಉಪವಾಸ ಜಪ ಪಾರಾಯಣಗಳನ್ನು ಒಂದು ದಿನವೂ ಬಿಡದೇ ಮಾಡಬೇಕು ಎನ್ನುವ ಸಂದೇಶವನ್ನು ಈ ಮೂಲಕ ಅಕ್ರೂರ ನೀಡುತ್ತಿದ್ದಾನೆ.