ಸುಂಟಿಕೊಪ್ಪ: ಹರದೂರು ಗ್ರಾಮದ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ವತಿಯಿಂದ ಆದಿನಾಗಬ್ರಹ್ಮ ಮೊಗೇರ ದೈವಗಳ ಹಾಗೂ ಕೊರಗ ತನಿಯ ದೈವದ ಹಾಗೂ ಮಂತ್ರವಾದಿ ಗುಳಿನಗ 85ನೇ ನೇಮೋತ್ಸವವು ಶನಿವಾರ ಮತ್ತು ಭಾನುವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ಶನಿವಾರ ಆಯುಧ ಪೂಜೆ, ಸಂಜೆ ನಿತ್ಯ ಪೂಜೆ ಮತ್ತು ಭಂಡಾರ ಹೊರಡುವುದರ ಮೂಲಕ ನೇಮೋತ್ಸವಕ್ಕೆ ಚಾಲನೆ ನೀಡಲಾಯಿತು. ಸಂಜೆ 7 ಗಂಟೆಯ ನಂತರ ಮಂತ್ರವಾದಿ ಗುಳಿಗನ ನೇಮ ನಡೆದು ಭಕ್ತರಲ್ಲಿ ಭಯ ಭಕ್ತಿ ಮೂಡಿಸಿತು. ರಾತ್ರಿ ಆದಿನಾಗಬ್ರಹ್ಮ ಮೊಗೇರ ದೈವಗಳ ಆದಿಮಾಯೆ ತನ್ನಿ ಮಾನಿಗ ಗರಡಿ ಇಳಿಯಿತು.
ಭಾನುವಾರ ಮುಂಜಾನೆ ತಾವು ನಂಬಿದ ಕಾರಣಿಕ ದೈವಗಳಿಗೆ ಭಕ್ತರು ಹರಕೆ ಮತ್ತು ಕಾಣಿಕೆ ಅರ್ಪಿಸಿದರು. ಬೆಳಗ್ಗೆ 9 ಗಂಟೆ ನಂತರ 2 ಕೊರಗ ತನಿಯ ದೈವದ ಕಾರಣಿಕ ನೇಮೋತ್ಸವವು ನಡೆಯಿತು. ತಾನು ನಂಬಿದವರಿಗೆ ಇಂಬು ನೀಡುವೆ, ನನಗೆ ಮೋಸ ಮಾಡಿದರೆ ಕೆಲವೇ ದಿನದಲ್ಲಿ ತಪ್ಪಿನ ಮನವರಿಕೆ ಮಾಡಿಕೊಡುವೆ ಎಂದು ನುಡಿ ನೀಡಿದ ಕೊರಗಜ್ಜ, ತನ್ನ ಭಕ್ತರಲ್ಲಿ ತನ್ನ ಶಕ್ತಿ ಕಾರಣಿಕವನ್ನು ತೋರಿಸಿ ಭಯ ಉಂಟುಮಾಡಿತು. ನಂತರ ಗಂಧಪ್ರಸಾದ ವಿತರಿಸಲಾಯಿತು. ರಾತ್ರಿ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆದವು.
ಸುಂಟಿಕೊಪ್ಪ, ಹರದೂರು, ಮಾದಾಪುರ,ಮಡಿಕೇರಿ, ಕುಶಾಲನಗರ, ಮೈಸೂರು, ಮಂಗಳೂರು ಸೂಳ್ಯ, ಪುತ್ತೂರು, ಸಕಲೇಶಪುರ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೇಮೋತ್ಸವ ವೀಕ್ಷಿಸಿದರು.
