ಗೋಕಾಕ: ಗ್ರಾಮ ದೇವತೆಯರ ಜಾತ್ರೆ ಅಂಗವಾಗಿ ಏ.30ರಿಂದ ಮೇ 8ರ ವರೆಗೆ ಅಷ್ಟ ಬಂಧ ಪ್ರತಿಷ್ಠಾ ಬ್ರಹ್ಮ ಕಳಸೋತ್ಸವ ಮತ್ತು ಮಹಾ ರಥೋತ್ಸವವು ಜರುಗಲಿದೆ. ಎಲ್ಲರೂ ಸೇವಾ ಮನೋಭಾವದಿಂದ ಯಶಸ್ಸಿಗೆ ಶ್ರಮಿಸಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ನಗರದ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಶ್ರೀ ಗ್ರಾಮದೇವಿಯರ ಜಾತ್ರೆ ಅಂಗವಾಗಿ ಜರುಗಲಿರುವ ಅಷ್ಟ ಬಂಧ ಪ್ರತಿಷ್ಠಾ ಬ್ರಹ್ಮ ಕಳಸೋತ್ಸವ ಹಾಗೂ ಮಹಾ ರಥೋತ್ಸವದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಹಾಲಕ್ಷ್ಮೀ, ಗಣಪತಿ, ಈಶ್ವರ, ಆಂಜನೇಯ, ನಾಗದೇವರು ಹಾಗೂ ನವಗ್ರಹ ದೇವರುಗಳ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮಕಳಸೋತ್ಸವ ಒಟ್ಟು 9 ದಿನಗಳವರೆಗೆ ಜರುಗಲಿದೆ. ಮಹೋತ್ಸವದ ನಿರ್ವಹಣೆಗೆ ವಿವಿಧ ಉಪಸಮಿತಿ ರಚಿಸಬೇಕು ಎಂದರು.
ಜೂ.30ರಿಂದ ಜು.8ರ ವರೆಗೆ ಗೋಕಾಕ ಗ್ರಾಮದೇವಿಯರ ಜಾತ್ರೆ ವಿಜೃಂಭಣೆಯಿಂದ ನೆರವೇರಲಿದೆ. ಒಂಬತ್ತು ದಿನಗಳ ಕಾಲ ಪೂಜ್ಯರ ಪ್ರವಚನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ರಾಜ್ಯದಲ್ಲೇ ಮಾದರಿ ಜಾತ್ರೆಯಾಗಿಸುವ ದೆಸೆಯಲ್ಲಿ ಎಲ್ಲರೂ ಒಗ್ಗೂಡಿ ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸೋಣ ಎಂದರು.
ಪರಿವಾರದ ದೇವರುಗಳು ಇದೇ ಸಂದರ್ಭದಲ್ಲಿ ಪ್ರತಿಷ್ಠಾಪನೆಗೊಳ್ಳಲಿವೆ. ಪ್ರತಿದಿನ ಒಟ್ಟು 40 ಪೂಜೆಗಳು ನಡೆಯಲಿದ್ದು, ಎಲ್ಲರೂ ಭಾಗವಹಿಸಬೇಕು. ನಗರದ ವಿವಿಧ ಸಂಘಟನೆ, ಯುವಕ ಮಂಡಳ ಹಾಗೂ ಸಮುದಾಯಗಳ ಪ್ರಮುಖರು ಕೈಜೋಡಿಸಬೇಕು. ಸೇವಾ ಮನೋಭಾವದಿಂದ ದುಡಿಯೋಣ. ಮಹಾಲಕ್ಷ್ಮೀ ದೇವಿ ಎಲ್ಲರಿಗೂ ಒಳಿತು ಮಾಡಲಿ ಎಂದು ಆಶಿಸಿದರು.
ಸಮಿತಿ ರಚನೆ: ಏ.30 ರಿಂದ 9 ದಿನಗಳವರೆಗೆ ಜರುಗಲಿರುವ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮಕಳಸೋತ್ಸವದ ಯಶಸ್ಸಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಉಪ ಸಮಿತಿ ರಚಿಸಲಾಯಿತು.
ಮುಖಂಡರಾದ ಪ್ರಭು ಚವ್ಹಾಣ, ಅಡಿವೆಪ್ಪ ಕಿತ್ತೂರ, ಅಶೋಕ ಹೆಗ್ಗನ್ನವರ, ಬಸವಣ್ಣಿ ಬನ್ನಿಶೆಟ್ಟಿ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ವಿಕ್ರಮ ಅಂಗಡಿ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ, ವಕೀಲ ಎಂ.ವೈ,ಹಾರೂಗೇರಿ, ಸಿ.ಬಿ.ಕೌಜಲಗಿ, ವಿವಿಧ ಸಮುದಾಗಳ ಮುಖಂಡರು, ನಗರಸಭೆ ಸದಸ್ಯರು, ವ್ಯಾಪಾರಿಗಳು, ವಕೀಲರು ಹಾಗೂ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.