ತೇರದಾಳ: ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಹಿನ್ನೆಲೆ ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಯಲ್ಲಿನ ತೇರದಾಳ ಪಟ್ಟಣದ ಪೊಲೀಸ್ ಠಾಣೆ ಪಕ್ಕದಲ್ಲಿರುವ ಹನುಮಾನ ದೇವರ ದೇವಸ್ಥಾನವನ್ನು ಪುರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಭಾನುವಾರ ತೆರವುಗೊಳಿಸಲಾಯಿತು.
ಪಟ್ಟಣದಲ್ಲಿ ಬಾಕಿ ಉಳಿದ ಅನಧಿಕೃತ ಶೆಡ್ಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಸಂಬಂಧಿಸಿ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯ ಹೆದ್ದಾರಿಯಲ್ಲಿನ ದೇವಸ್ಥಾನ ತೆರವುಗೊಳಿಸಲಾಗಿದ್ದು, ಅಕ್ಕಪಕ್ಕದ ಶೆಡ್ಗಳನ್ನು ತೆರವು ಮಾಡುವಂತೆ ಸಂಬಂಧಿಸಿದ ಮಾಲೀಕರಿಗೆ ಮೌಖಿಕವಾಗಿ ತಿಳಿಸಲಾಗಿದೆ. ಒಂದು ವಾರದೊಳಗಾಗಿ ಪಟ್ಟಣದ ರಸ್ತೆ ಬದಿಯಲ್ಲಿರುವ ಅನಧಿಕೃತ ಎಲ್ಲ ಕೋಕಾಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಲಾಗುವುದು. ಪಿಡಬ್ಲುೃಡಿ ಇಲಾಖೆಯಿಂದ ಸರಹದ್ದು ಗುರುತಿಸುವ ಕಾರ್ಯ ಮಾಡಲಾಗುವುದು ಎಂದರು.
ಉಪ ತಹಸೀಲ್ದಾರ್ ಶ್ರೀಕಾಂತ ಮಾಯನ್ನವರ, ಗ್ರಾಮಲೆಕ್ಕಾಧಿಕಾರಿ ಪ್ರಕಾಶ ಮಠಪತಿ, ಪುರಸಭೆ ಸಿಬ್ಬಂದಿ ಕಿರಪ್ಪ ದಿಡ್ಡಿ ಸೇರಿ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಇದ್ದರು.