ಬಂಟ್ವಾಳ: ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿ ಸಂಘ, ಪ್ರೌಢಶಾಲೆ ಸಹಯೋಗದಲ್ಲಿ ನಡೆಯಲಿರುವ 23ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಇತ್ತೀಚೆಗೆ ನಡೆಯಿತು.

ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ ಘಟಕದ ಗೌರವ ಕಾರ್ಯದರ್ಶಿ ವಿ.ಸುಬ್ರಹ್ಮಣ್ಯ ಭಟ್ ಮಾತನಾಡಿ, ಸಾಹಿತ್ಯ ಸಮ್ಮೇಳನ ಅವಿಸ್ಮರಣೀಯವಾಗಿ ಉಳಿಯುವಂಥದ್ದು. ಹೋಬಳಿ, ತಾಲೂಕು, ಜಿಲ್ಲೆ ಅಥವಾ ಅಖಿಲ ಭಾರತ ಸಮ್ಮೇಳನವೆಂದು ತಾರತಮ್ಯ ಮಾಡಬೇಕಿಲ್ಲ. ಎಲ್ಲೆಡೆಯ ಸಾಹಿತ್ಯ ಪ್ರತಿಭೆಗಳಿಗೆ ಅವಕಾಶವೆಂಬ ವೇದಿಕೆ ಸಿದ್ಧವಾಗಬೇಕಾಗಿದೆ ಎಂದರು.
23ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿ ರಚನೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಉದ್ಯಮಿ ಹಾಜಿ ಸುಲೈಮಾನ್, ಅಧ್ಯಕ್ಷರಾಗಿ ಸತೀಶ್ ಆಳ್ವ ಬಾಳಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಉಪನ್ಯಾಸಕ ಎಂ.ಡಿ.ಮಂಚಿ, ಕೋಶಾಧಿಕಾರಿಯಾಗಿ ಹಾಜಿ ಸುಲೈಮಾನ್ ಜಿ.ಸುರಿಬೈಲು ಅವರನ್ನು ಆಯ್ಕೆ ಮಾಡಲಾಯಿತು.
ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ, ಕೋಶಾಧಿಕಾರಿ ಡಿ.ಬಿ.ಅಬ್ದುಲ್ ರಹಿಮಾನ್, ಕೊಳ್ನಾಡು ಗ್ರಾಪಂ ಅಧ್ಯಕ್ಷ ಅಶ್ರಫ್, ಮಂಚಿ ಗ್ರಾಪಂ ಅಧ್ಯಕ್ಷ ಎಂ.ಜಿ.ಇಬ್ರಾಹಿಂ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ, ಕೊಳ್ನಾಡು ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಶೀಲ ವಿಟ್ಲ ಉಪಸ್ಥಿತರಿದ್ದರು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ಎಂ.ಡಿ.ಮಂಚಿ ಪ್ರಾಸ್ತಾವಿಸಿದರು. ವಕೀಲ ರವೀಂದ್ರ ಕುಕ್ಕಾಜೆ ವಂದಿಸಿದರು. ತಾಲೂಕು ಸಾಹಿತ್ಯ ಪರಿಷತ್ ಘಟಕದ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.