ಅಣ್ಣಿಗೇರಿ: ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ತಾಲೂಕು ಆಡಳಿತದ ನಡೆ ಹಳ್ಳಿ ಕಡೆಗೆ ಎಂಬ ನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಗ್ರಾಮೀಣ ಪ್ರದೇಶಗಳ ನಾಗರಿಕರ ಸಮಸ್ಯೆಗಳನ್ನು ಗ್ರಾಪಂ ಮಟ್ಟದಲ್ಲಿಯೇ ಪರಿಹರಿಸಲು ಯತ್ನಿಸಲಾಗುತ್ತಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಮಂಗಳವಾರ ತಾಲೂಕಿನ ಇಬ್ರಾಹಿಂಪೂರ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಕಂದಾಯ ಅದಾಲತ್ ಸಾರ್ವಜನಿಕ ಕುಂದುಕೊರತೆ ನಿವಾರಣಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ರೈತರು, ವೃದ್ಧರು ತಮ್ಮ ಕೆಲಸಗಳಿಗಾಗಿ ತಾಲೂಕು ಕೇಂದ್ರಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಈ ಕಾರ್ಯಕ್ರಮ ಆಯೋಜಿಸಿದ್ದು, ಕಂದಾಯ ಇಲಾಖೆಯಿಂದಾಗುವ ಉಪಯೋಗಗಳ ಕುರಿತು ಅರಿವು ಮೂಡಿಸುವ ಜತೆಗೆ ಸಾರ್ವಜನಿಕ ಕುಂದುಕೊರತೆಗಳನ್ನು ನಿವಾರಿಸಲಾಗುತ್ತಿದೆ ಎಂದರು.
ಪೋತಿಯಾದ ಕುಟುಂಬಕ್ಕೆ ವಾರಸಾ ಪ್ರಕಾರ ದಾಖಲಾತಿ ಮಾಡಿದ 10 ಉತಾರಗಳು, ರೈತ ಕಟುಂಬಗಳಿಗೆ ಉತಾರ, ವಿಧವಾ ವೇತನ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ನಂತರ ಡಾ. ಅಂಬೇಡ್ಕರ ಓಣಿಗೆ ತೆರಳಿ ವಿವಿಧ ಕಾಮಗಾರಿಗಳನ್ನು ಶಾಸಕರು ಪರಿಶೀಲನೆ ನಡೆಸಿದರು. ಅಣ್ಣಿಗೇರಿ ತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಕಂದಾಯ ನಿರೀಕ್ಷಕ ರಿಷಿ ಸಾರಂಗಿ, ನಬೀಸಾಬ ನದಾಫ, ಗ್ರಾಪಂ ಅಧ್ಯಕ್ಷೆ ಮಲ್ಲವ್ವ ಜೋಗಿ, ಉಪಾಧ್ಯಕ್ಷ ಆನಂದ ಕೆಂಚಣ್ಣವರ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.