ಮಸ್ಕಿ: ಕೆರೆಯಲ್ಲಿ ನೀರಿನ ಪ್ರಮಾಣ ಬಹಳ ಕಡಿಮೆ ಇದೆ. ಐದು ದಿನಕ್ಕೆ ಒಮ್ಮೆ ಬಿಟ್ಟರೂ 15 ದಿನಗಳವರೆಗೆ ಮಾತ್ರ ಸಾಲುತ್ತೆ. ಹಾಗಾಗಿ ಬರುವ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ:ಕುಕ್ಕರಹಳ್ಳಿ ಕೆರೆಗೆ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಿ : ಜಿಲ್ಲಾಧಿಕಾರಿ ಸೂಚನೆ
ಪಟ್ಟಣದ ಬಳಗನೂರು ಮಾರ್ಗದಲ್ಲಿರುವ ಕೆರೆಯನ್ನು ಮಂಗಳವಾರ ವೀಕ್ಷಿಸಿ, ಕುಡಿಯುವ ನೀರಿನ ಕೆರೆಯನ್ನು ಪರಿಶೀಲಿಸಿದ ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸಕಾಲಕ್ಕೆ ಮಳೆ ಬಾರದೆ ಕುಡಿಯುವ ನೀರಿನ ಪೂರೈಕೆಗೆ ಕೆರೆ ಖಾಲಿ ಆದರೆ ಖಾಸಗಿ ಕೊಳವೆಬಾವಿ ಸೇರಿ ವಿವಿಧ ಮೂಲಗಳಿಂದ ನೀರು ಪಡೆಯಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ತುಂಗಭದ್ರ ಜಲಾಶಯಕ್ಕೆ ನೀರಿನ ಪ್ರಮಾಣ ಹೆಚ್ಚಳವಾದರೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕುಡಿಯುವ ನೀರಿಗಾಗಿ ತುಂಗಭದ್ರ ಎಡದಂಡೆ ಕಾಲುವೆಗೆ ನೀರು ಬಿಡಿಸಲು ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಜಲಾಶಯಕ್ಕೆ ನೀರು ಬಾರದಿದ್ದರೆ ಮಾತ್ರ ನೀರಿನ ಅಭಾವ ಉಂಟಾಗಲಿದೆ.
ಮಸ್ಕಿ ಪಟ್ಟಣ ದಿನೇ ದಿನೆ ಬೆಳೆಯುತ್ತಿರುವುದರಿಂದ ಈಗಿರುವ ಕೆರೆಯ ನೀರು ಸಾಲುತ್ತಿಲ್ಲ. ಮತ್ತೊಂದು ಕೆರೆ ನಿರ್ಮಾಣಕ್ಕೆ ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಕಾಂಗ್ರೆಸ್ ಮುಖಂಡರಾದ ಶರಣಬಸವ ಮಟ್ಟೂರು, ನಾರಯಣಪ್ಪ ಕಾಸ್ಲಿ, ಸುರೇಶ ಬ್ಯಾಳಿ ಇತರರಿದ್ದರು.