ಅಥಣಿ: ತಾಲೂಕಿನಲ್ಲಿ ಸೋಮವಾರ ರಾತ್ರಿ ಅಕ್ರಮ ಮರಳು ಸಾಗಣೆ ತಡೆಯಲು ಹೋಗಿದ್ದ ತಹಸೀಲ್ದಾರ್ ವಾಹನಕ್ಕೆ ಟ್ರ್ಯಾಕ್ಟರ್ನಿಂದ ಡಿಕ್ಕಿ ಹೊಡೆದು, ತಹಸೀಲ್ದಾರ್ ದುಂಡಪ್ಪ ಕೋಮಾರ ಅವರ ಹತ್ಯೆಗೆ ಯತ್ನಿಸಿ ಪರಾರಿಯಾದವರ ಶೋಧ ಕಾರ್ಯದಲ್ಲಿ ಅಥಣಿ ಪೊಲೀಸರು ನಿರತರಾಗಿದ್ದಾರೆ.

ಬಾಳು ಹಜಾರೆ ಹಾಗೂ ಇನ್ನಿತರರು ತಹಸೀಲ್ದಾರ್ ವಾಹನಕ್ಕೆ ಟ್ರ್ಯಾಕ್ಟರ್ನಿಂದ ಡಿಕ್ಕಿ ಹೊಡೆದವರು ಎಂದು ತಿಳಿದು ಬಂದಿದ್ದು, ಅವರ ಬಂಧನಕ್ಕೆ ಜಾಲ ಬೀಸಲಾಗಿದೆ. ಟ್ರ್ಯಾಕ್ಟರ್ನಿಂದ ಡಿಕ್ಕಿ ಹೊಡೆದ ಪರಿಣಾಮ ತಹಸೀಲ್ದಾರ್ ವಾಹನ
ಚಾಲಕ ಅನಿಲ ಗಸ್ತಿ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಅಥಣಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಲಾಕ್ಡೌನ್ ಕರ್ತವ್ಯದಲ್ಲಿ ಪೊಲೀಸರು ತೊಡಗಿಕೊಂಡಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ದಂಧೆಕೋರರು, ಸುಲಭವಾಗಿ ಮರಳು ಸಾಗಣೆ ಮಾಡುತ್ತಿದ್ದಾರೆ. ಅಲ್ಲದೆ, ಕೃಷ್ಣಾ ನದಿಯಲ್ಲಿ ಸದ್ಯ ನೀರು ತಡೆ ಹಿಡಿದಿರುವುದರಿಂದ ಅಗ್ರಾಣಿ ನದಿಯ ಹರಿವಿನ ಉದ್ದಗಲಕ್ಕೂ ಬರುವ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.