ತಿ.ನರಸೀಪುರ: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ(ಪಿಎಲ್ಡಿ) ಬ್ಯಾಂಕ್ನ ಆಡಳಿತ ಮಂಡಳಿ ಸದಸ್ಯರ ಚುನಾವಣೆಗೆ ಫೆ.2 ರಂದು ನಿಗದಿಪಡಿಸಲಾಗಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಸಾಲಗಾರರ ವಿವಿಧ ಕ್ಷೇತ್ರಗಳಿಗೆ ಸ್ಪರ್ಧೆ ಬಯಸಿ ಹಲವರು ನಾಮಪತ್ರ ಸಲ್ಲಿಸಿದರು.
ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ನ 5 ವರ್ಷಗಳ ಅವಧಿಗೆ ಚುನಾವಣೆ ನಡೆಯಲಿದ್ದು, 14 ಜನರ ನಿರ್ದೇಶಕರ ಆಯ್ಕೆಗಾಗಿ ಫೆ.2ರಂದು ಚುನಾವಣೆ ನಿಗದಿ ಪಡಿಸಲಾಗಿದೆ. ಜ.19ರಿಂದಲೇ ನಾಮ ಪತ್ರಸಲ್ಲಿಕೆ ಕಾರ್ಯ ಆರಂಭಗೊಂಡಿದ್ದು, ಜ.25ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದೆ.
ಸಾಲ ಪಡೆದವರ ಕ್ಷೇತ್ರಗಳ ಪೈಕಿ ಕುಪ್ಯ, ಬನ್ನೂರು, ಯಾಚೇನಹಳ್ಳಿ, ಅತ್ತಹಳ್ಳಿ, ಸೋಮನಾಥಪುರ, ಚಿದರವಳ್ಳಿ, ಕೊತ್ತೇಗಾಲ ಕ್ಷೇತ್ರಗಳನ್ನು ಸಾಮಾನ್ಯ ಕ್ಷೇತ್ರಗಳಾಗಿ, ಸೋಸಲೆ(ಪ.ಜಾತಿ), ಮಾದಾಪುರ(ಪ.ಪಂಗಡ), ಮೂಗೂರು (ಮಹಿಳಾ ಮೀಸಲು), ಕಸಬಾ(ಮಹಿಳಾ ಮೀಸಲು), ದೊಡ್ಡೇಬಾಗಿಲು (ಹಿಂದುಳಿದ ಪ್ರವರ್ಗ ಎ), ತಲಕಾಡು (ಹಿಂದುಳಿದ ಪ್ರವರ್ಗ ಬಿ) ಹಾಗೂ ತಿ.ನರಸೀಪುರ ತಾಲೂಕು ಕಾರ್ಯ ವ್ಯಾಪ್ತಿಗೆ ಬರುವ ಗ್ರಾಮಗಳನ್ನು ಸಾಲಗಾರರಲ್ಲದ ಕ್ಷೇತ್ರಗಳೆಂದು ವಿಂಗಡಣೆ ಮಾಡಲಾಗಿದೆ.
ಭಾನುವಾರ ಹಾಗೂ ಸೋಮವಾರ ನಾಮಪತ್ರ ಸಲ್ಲಿಸಲು ಮೀಸಲಿಡಲಾಗಿದ್ದ ಸಮಯಕ್ಕೆ ಒಟ್ಟು 7 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಸಾಲಗಾರರಲ್ಲದ ಕ್ಷೇತ್ರದಿಂದ ಆಯ್ಕೆ ಬಯಸಿ ಎಸ್ಟಿ ವರ್ಗಕ್ಕೆ ಮೀಸಲಾದ ಮಾದಾಪುರ ಕ್ಷೇತ್ರದಿಂದ ಕೆ.ಬಿ.ಪ್ರಭುಸ್ವಾಮಿ, ಹೆಮ್ಮಿಗೆ ಸೋಮಣ್ಣ, ಮಹಿಳಾ ಮೀಸಲು ಕಸಬಾ ಕ್ಷೇತ್ರದಿಂದ ಮನ್ನೇಹುಂಡಿ ಎಂ.ನಾಗರತ್ನ, ಸಾಮಾನ್ಯ ವರ್ಗಕ್ಕೆ ಮೀಸಲಾದ ಯಾಚೇನಹಳ್ಳಿ ಕ್ಷೇತ್ರದಿಂದ ಟಿ.ಸಿ.ಸಂದೀಪ್ ಹಾಗೂ ತುರುಗನೂರು ಟಿ.ಎಸ್.ಪ್ರಸನ್ನ, 2ಎ ವರ್ಗಕ್ಕೆ ಮೀಸಲಾದ ದೊಡ್ಡೇಬಾಗಿಲು ಕ್ಷೇತ್ರದಿಂದ ಎಂ.ಮಲ್ಲಿಕಾರ್ಜುನ ಸ್ವಾಮಿ ನಾಮಪತ್ರ ಸಲ್ಲಿಸಿದರೆ, ಸಾಮಾನ್ಯ ವರ್ಗಕ್ಕೆ ಮೀಸಲಾದ ಅತ್ತಹಳ್ಳಿ ಕ್ಷೇತ್ರದಿಂದ ಎ.ಎಂ.ಮಹದೇವ(ಮಧು) ಅವರು ಸಹಾಯಕ ಚುನಾವಣಾಧಿಕಾರಿ ವಿಮಲ್ ಕುಮಾರ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.
ನಾಮಪತ್ರಗಳ ಪರಿಶೀಲನೆ ಜ.26 ರಂದು ನಡೆಯಲಿದ್ದು, ನಾಮಪತ್ರ ಹಿಂಪಡೆಯಲು 27 ಕೊನೇ ದಿನವಾಗಿದೆ. ಚುನಾವಣೆ ಫೆ.2ರಂದು ಗುರುಭವನದ ಹಿಂಭಾಗದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದ್ದು, ಅಂದೇ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ವ್ಯವಸ್ಥಾಪಕ ಎನ್.ಮಹೇಶ್ ತಿಳಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಮುಖಂಡರಾದ ಎಚ್.ದೇವರಾಜು, ಎಚ್.ನಾಗರಾಜು, ಬಿ.ಆರ್.ರಾಮಕೃಷ್ಣ, ವೈ.ಕೆ.ರವಿಕುಮಾರ್, ಸಿ.ಲಿಂಗಣ್ಣ, ಎ.ಎನ್.ಸುನೀಲ್, ಸತೀಶ್, ಚಂದ್ರಶೇಖರ್, ಗಂಗಮ್ಮ, ಮಾದೇಗೌಡ,ಶಿವಕುಮಾರ್, ಸಂಜಯ್,ಸ್ವಾಮಿ , ಪಿ.ಸತೀಶ್, ಮಹದೇವ, ಎ.ಆರ್.ನಾಗರಾಜು, ಬಿ.ಚೇತತಾ, ಕೀರ್ತಿ, ನಾಗೇಂದ್ರ, ರವಿ ಇತರರಿದ್ದರು.