ಬೆಂಗಳೂರು: ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸುತ್ತಿರುವ ‘ಸೂತ್ರಧಾರಿ’ ಚಿತ್ರ ಇದೇ ಶುಕ್ರವಾರ (ಮೇ 9ಕ್ಕೆ) ಬಿಡುಗಡೆಯಾಗುತ್ತಿದೆ. ಕಿರಣ್ ಕುಮಾರ್ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿದ್ದು, ಚಂದನ್ಗೆ ಅಪೂರ್ವಾ ಜೋಡಿಯಾಗಿದ್ದಾರೆ. ಸಂಜನಾ ಆನಂದ್ ವಿಶೇಷ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೇಲರ್ ಹಾಗೂ ಸಾಂಗ್ ರಿಲೀಸ್ ಆಗಿದ್ದು, ಇತ್ತೀಚೆಗಷ್ಟೆ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿವರಾಜಕುಮಾರ್ ಮತ್ತು ರವಿಚಂದ್ರನ್ ಕಾರ್ಯಕ್ರಮಕ್ಕೆ ಆಗಮಿಸಿ, ಚಿತ್ರಕ್ಕೆ ಶುಭ ಹಾರೈಸಿದರು.

ಶಿವಣ್ಣ, ‘ಚಂದನ್ ಶೆಟ್ಟಿಗೆ ಅವರದ್ದೇ ಆದ ಸ್ಟೈಲ್ ಇದೆ. ಅವರ ರ್ಯಾಪ್ ಸಾಂಗ್ಗಳನ್ನು ನಾನು ಗುನುಗುತ್ತಿರುತ್ತೇನೆ. ಈ ಚಿತ್ರದ ಮೂಲಕ ಅವರು ಪೂರ್ಣಪ್ರಮಾಣದ ನಾಯಕರಾಗುತ್ತಿದ್ದಾರೆ. ಅವರಿಗೆ ಶುಭವಾಗಲಿ’ ಎಂದರು. ಚಂದನ್ ಶೆಟ್ಟಿ, ‘ಹಿಂದೆ ಹೇಳಿದಂತೆ ನಾನು ಹೀರೋ ಆಗಬೇಕು ಎಂದು ಆಸೆ ಪಟ್ಟವರು ನಮ್ಮ ತಂದೆ-ತಾಯಿ. ಅವರ ಆಸೆ ಈಡೇರುವ ದಿನ ಬಂದಾಗಿದೆ. ಶಿವಣ್ಣ ಹಾಗೂ ರವಿಚಂದ್ರನ್ ಸರ್ ಬಂದು ನಮ್ಮ ತಂಡಕ್ಕೆ ಆಶೀರ್ವದಿಸಿರುವುದು ಹೆಚ್ಚು ಖುಷಿ ನೀಡಿದೆ’ ಎಂದರು. ರವಿಚಂದ್ರನ್, ‘ಶಿವಣ್ಣ ಕಾರ್ಯಕ್ರಮಕ್ಕೆ ಬಂದಿರೋದು ಆಚ್ಚರಿ. ಇಂಡಸ್ಟ್ರಿಯಲ್ಲಿ ಇಂದಿಗೂ ವಾರ್ ಮಾಡಿಕೊಳ್ಳದೆ ಇರುವವರು ನಾವಿಬ್ಬರೇ. ಇಬ್ಬರೂ ಸಿನಿಮಾವನ್ನು ಅಷ್ಟು ಪ್ರೀತಿಸುತ್ತೇವೆ. ಚಿತ್ರದ ಹಾಡು, ಸಂಭಾಷಣೆಯನ್ನು ಟ್ರೆಂಡಿಂಗ್ ಮಾಡುವುದಕ್ಕಿಂತ ಸಿನಿಮಾವೇ ಟ್ರೆಂಡ್ ಆಗುವಂತೆ ನೋಡಿಕೊಳ್ಳಬೇಕು. ಹಾಗಾಗಿ, ಸಿನಿಮಾ ಹಿಟ್ ಆಗಬೇಕಾದರೆ ಏನು ಮಾಡಬೇಕು ಎಂಬುದನ್ನು ಮೊದಲು ನಾವು ತಿಳಿದುಕೊಳ್ಳಬೇಕಿದೆ. ಸಿನಿಮಾಕ್ಕೆ ಜನರನ್ನು ಕರೆಯುವುದಕ್ಕಿಂತ, ಜನರೇ ಹುಡುಕಿಕೊಂಡು ಬರುವಂತಹ ಸಿನಿಮಾ ಮಾಡಿ’ ಎಂದು ಶುಭ ಹಾರೈಸಿದರು.