ನವದೆಹಲಿ: ನಿರ್ಭಯಾ ಅತ್ಯಾಚಾರ ಘಟನೆ ನಡೆದಾಗ ತಾನು ಅಪ್ರಾಪ್ತ ವಯಸ್ಸಿನ ಬಾಲಕ. ಹೀಗಾಗಿ ಕೋರ್ಟ್ ನನ್ನನ್ನು ಅಪ್ರಾಪ್ತ ಎಂದು ಪರಿಗಣಿಸುವಂತೆ ಪವನ್ ಕುಮಾರ್ ಗುಪ್ತಾ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ.
2012 ರ ದೆಹಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಾಲ್ವರಲ್ಲಿ ಒಬ್ಬನಾದ ಪವನ್ ಕುಮಾರ್ ಗುಪ್ತಾನನ್ನು ಅಪ್ರಾಪ್ತ ವಯಸ್ಕನೆಂದು ಪರಿಗಣಿಸುವ ಅಗತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದೆ.
ಅಲ್ಲದೆ ಫೆಬ್ರವರಿ 1 ರಂದು ಬೆಳಗ್ಗೆ 6 ಗಂಟೆಗೆ ಮರಣದಂಡನೆ ವಿಧಿಸಿರುವುದನ್ನು ನಿಲ್ಲಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಆರ್. ಬಾನುಮತಿ ನೇತೃತ್ವದ ನ್ಯಾಯಪೀಠ ಪವನ್ ಗುಪ್ತಾ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯನ್ನು ವಿಚಾರಣೆ ನಡೆಸಿತು.
ಬಾಲ ಅಪರಾಧಿ ನ್ಯಾಯ ಕಾಯ್ದೆ ಅಡಿ ಯಾವುದೇ ಹಂತದಲ್ಲಿ ಆರೋಪಿಗಳು ತಮ್ಮ ವಯಸ್ಸಿನ ಮಾಹಿತಿ ತಿಳಿಸಲು ಅವಕಾಶ ಇದೆ. ಆದರೆ ಕೋರ್ಟ್ ಮುಂದೆ ಈ ವಿಚಾರ ಈಗಾಗಲೇ ಬಂದಿದೆ. ಹೀಗಾಗಿ ಮತ್ತೆ ಈ ವಿಷಯದ ಬಗ್ಗೆ ವಿಚಾರಣೆ ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಟ್ಟಿದೆ.
ಪವನ್ ಕುಮಾರ್ ಗುಪ್ತಾ ಅಪ್ರಾಪ್ತ ವಯಸ್ಸಿನ ಆರೋಪಿ ಎಂದು ಈಗಾಗಲೇ ವಿಚಾರಣಾ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರಿಂಕೋರ್ಟ್ನಲ್ಲಿ ವಾದ ಮಂಡಿಸಲಾಗಿತ್ತು. ಮೂರು ಕೋರ್ಟ್ಗಳು ವಾದ ಆಲಿಸಿ ಅರ್ಜಿಯನ್ನು ವಜಾಗೊಳಿಸಿದ್ದವು. ಇದನ್ನು ಗಮನಿಸಿದ ಸುಪ್ರೀಂಕೋರ್ಟ್ ಮತ್ತೊಮ್ಮೆ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿತು. (ಏಜೆನ್ಸೀಸ್)