More

    ವಿಧಾನಸಭೆ ಸ್ಪೀಕರ್​ಗೆ ಶಾಸಕರನ್ನು ಅಮಾನತು ಮಾಡುವ ಅಧಿಕಾರವಿದೆಯೇ?: ಪರಿಶೀಲಿಸಲು ಸಂಸತ್​ಗೆ ಸುಪ್ರೀಂಕೋರ್ಟ್​ ಸೂಚನೆ

    ನವದೆಹಲಿ: ವಿಧಾನಸಭೆಯ ಸ್ಪೀಕರ್​ಗೆ ಶಾಸಕರನ್ನು ಅಮಾನತು ಮಾಡುವ ಅಧಿಕಾರವಿದೆಯೇ ಎಂದು ಪರಿಶೀಲಿಸಿ ಎಂದು ಸುಪ್ರೀಂಕೋರ್ಟ್​ ಸಂಸತ್​ಗೆ ಸೂಚಿಸಿದೆ.

    ಮಣಿಪುರದ ಸಚಿವ ಟಿ. ಶ್ಯಾಮ್​ಕುಮಾರ್​ ಅವರ ಅಮಾನತು ಸಂಬಂಧ ಸಲ್ಲಿಕೆಯಾದ ಅರ್ಜಿ ವಿಚಾರಣೆ ವೇಳೆ ಈ ಪ್ರಶ್ನೆ ಎತ್ತಿದ ನ್ಯಾಯಮೂರ್ತಿ ರೋಹಿಂಗ್ಟನ್​ ಫಾಲಿ ನಾರಿಮನ್​ ಅವರಿದ್ದ ಪೀಠ, ನಾಲ್ಕು ವಾರಗಳಲ್ಲಿ ಈ ಬಗ್ಗೆ ನಿರ್ಣಯಿಸಲು ಮಣಿಪುರದ ವಿಧಾನಸಭಾ ಅಧ್ಯಕ್ಷರಿಗೆ ಸೂಚಿಸಿತು.

    2017ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ನ ಟಿ. ಶ್ಯಾಮ್​ಕುಮಾರ್​ ಆ್ಯಂಡ್ರೊ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ವೇಳೆ ಕಾಂಗ್ರೆಸ್​ 28 ಸ್ಥಾನಗಳನ್ನು ಪಡೆದಿತ್ತು. ಒಟ್ಟು 60 ಸ್ಥಾನ ಇರುವ ಮಣಿಪುರದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಇನ್ನೂ 3 ಸ್ಥಾನ ಪಡೆಯಬೇಕಾಗಿತ್ತು.

    21 ಸ್ಥಾನ ಗೆದ್ದಿದ್ದ ಬಿಜೆಪಿ ಉಳಿದ ಪಕ್ಷಗಳೊಂದಿಗೆ ಸೇರಿದ ಮೇಲೆ ಅದರ ಬಲಾಬಲ 30 ಆಗಿತ್ತು. ಆದರೆ ಸರ್ಕಾರ ರಚಿಸಲು ಇನ್ನೂ ಒಬ್ಬ ಶಾಸಕರ ಬೆಂಬಲ ಅವಶ್ಯವಿತ್ತು. ಆಗ ಶ್ಯಾಮ್​ಕುಮಾರ್​ ಅವರು ಬಿಜೆಪಿ ಸೇರಿ ಸರ್ಕಾರ ರಚನೆಗೆ ಸಹಕರಿಸಿದ್ದರು. ಆದರೆ ಅವರು ಕಾಂಗ್ರೆಸ್​ಗೆ ರಾಜೀನಾಮೆ ನೀಡಿರಲಿಲ್ಲ.

    ಇದೇ ಸ್ಥಿತಿ ಕರ್ನಾಟಕದಲ್ಲೂ ಆಗಿತ್ತು. ಕಳೆದ ಬಾರಿ ಪಕ್ಷ ವಿರೋಧಿ ನಡೆ ಅನುಸರಿಸಲಾಗಿದೆ ಎಂದು ಅಂದಿನ ಸ್ಪೀಕರ್​ ರಮೇಶ್​ಕುಮಾರ್​ ಅವರು ಬಂಡಾಯವೆದ್ದ 17 ಶಾಸಕರನ್ನು ಅಮಾನತು ಮಾಡಿದ್ದರು. ಮತ್ತೆ ಅವರು ಚುನಾವಣೆ ಎದುರಿಸಬೇಕಾಯಿತು. ಇದರಿಂದ ಕಾಂಗ್ರೆಸ್​ -ಜೆಡಿಎಸ್​ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ರಚನೆಯಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts