ಕೊಟ್ಟೂರು: ತಾಲೂಕಿನ 12 ಗ್ರಾಪಂ ಗ್ರಂಥಾಲಯಗಳಲ್ಲಿ ಐದು ಲೈಬ್ರರಿಗಳಿಗೆ ಮೇಲ್ವಿಚಾರಕರೇ ಇಲ್ಲ. ಇನ್ನೂ ಎರಡು ನೂತನ ಗ್ರಂಥಾಲಯಗಳು ಓದುಗರಿಂದ ದೂರ ಉಳಿದಿವೆ.
ಇದನ್ನೂ ಓದಿ: ಗ್ರಂಥಾಲಯಕ್ಕೆ ಬಂದು ಪುಸ್ತಕಗಳನ್ನು ಓದುವುದರಿಂದ ಹೆಚ್ಚಿನ ಜ್ಞಾನ
ತಾಲೂಕಿನ ದೂಪದಹಳ್ಳಿ, ಕಾಳಾಪುರ, ಅಲಬೂರು, ಕಂದಗಲ್ಲು, ತೂಲಹಳ್ಳಿ ಗ್ರಾಪಂ ಗ್ರಂಥಾಲಯಗಳಲ್ಲಿ ಒಂದು ವರ್ಷದಿಂದ ಮೇಲ್ವಿಚಾರಕರಿಲ್ಲ. ಪಂಚಾಯಿತಿ ಜವಾನ, ಗುಮಾಸ್ತರ ಉಸ್ತುವಾರಿಯಲ್ಲಿವೆ. ಚಿರಬಿ, ನಾಗರಕಟ್ಟೆ ಗ್ರಾಪಂಗೆ ಸರ್ಕಾರ ಗ್ರಂಥಾಲಯ ಮಂಜೂರು ಮಾಡಿ ವರ್ಷಗಳೇ ಕಳೆದರೂ ಇನ್ನೂ ಬಾಗಿಲೇ ತೆರೆದಿಲ್ಲ.
ಈ ಏಳು ಗ್ರಾಪಂ ಗ್ರಂಥಾಲಯ ಸೇರಿ ವಿಜಯನಗರ ಜಿಲ್ಲೆಯಲ್ಲಿ ಖಾಲಿ ಇದ್ದ 22 ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಎಂಟು ತಿಂಗಳ ಹಿಂದೆ ಜಿಪಂ ಉಪ ಕಾರ್ಯದರ್ಶಿ ಹಾಗೂ ವಿಜಯನಗರ ಮತ್ತು ಬಳ್ಳಾರಿ ಜಿಲ್ಲಾ ಗ್ರಂಥಾಲಯ ಉಪ ನಿರ್ದೇಶಕರ ನೇತೃತ್ವದಲ್ಲಿ ಸಂದರ್ಶನ ನಡೆದಿತ್ತು.
ಕಳೆದ ಎರಡು ತಿಂಗಳ ಹಿಂದೆ ಮೇಲ್ವಿಚಾರಕ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಅಂತಿಮ ಪಟ್ಟಿ ಬಿಡುಗಡೆ ಮಾಡಿಲ್ಲ.
ಮೇಲ್ವಿಚಾರಕ ಹುದ್ದೆಗೆ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯ, ಗುಜರಾತ್, ದೆಹಲಿ, ಇನ್ನೂ ಮುಂತಾದ ಹೊರ ರಾಜ್ಯದ ವಿಶ್ವವಿದ್ಯಾಲಯಗಳಿಂದ ಲೈಬ್ರರಿ ಸೈನ್ಸ್ ಸರ್ಟಿಫಿಕೇಟ್ನೊಂದಿಗೆ ಸಂದರ್ಶನಕ್ಕೆ ಬಂದು ಆಯ್ಕೆಯಾಗಿರುವ ಆರೋಪಗಳಿವೆ.
ಅವರ ಸರ್ಟಿಫಿಕೆಟ್ ಬಗ್ಗೆ ಅನುಮಾನಗೊಂಡ ಕೆಲವರು ಕೋರ್ಟ್ ಮೆಟ್ಟಲೇರಲು ಚಿಂತನೆ ನಡೆಸಿದ್ದಾರೆ. ವಿಜಯನಗರ ಜಿಲ್ಲೆಯ 22 ಗ್ರಾಪಂ ಗ್ರಂಥಾಲಯಗಳ ಮೇಲ್ವಿಚಾರಕರ ಹುದ್ದೆ ನೇಮಕ ವಿಳಂಬಕ್ಕೆ ಇದೂ ಕಾರಣ ಎನ್ನಲಾಗುತ್ತಿದೆ. ಸರ್ಕಾರ ಗ್ರಾಮೀಣ ಭಾಗದಲ್ಲಿನ ವಿದ್ಯಾವಂತರು, ವಿದ್ಯಾರ್ಥಿಗಳಿಗೆ ಪುಸ್ತಕ ಓದುವ ಸಂಸ್ಕೃತಿ ಹೆಚ್ಚಿಸುವ ಮತ್ತು ವಿಶ್ವದ ವಿದ್ಯಮಾನಗಳ ಅರಿವು ಮೂಡಿಸಲು ಗ್ರಾಪಂ ಗ್ರಂಥಾಲಯ ಆರಂಭಿಸಿದ್ದು, ಕೊಟ್ಟೂರು ತಾಲೂಕಿನ ಏಳು ಗ್ರಂಥಾಲಯಗಳು ಓದುಗರರಿಗೆ ಮರೀಚಿಕೆಯಾಗಿವೆ.
ವಿಜಯನಗರ ಜಿಲ್ಲೆಯಲ್ಲಿ 22 ಗ್ರಾಪಂ ಗ್ರಂಥಾಲಯದ ಮೇಲ್ವಿಚಾರಕ ಹುದ್ದೆ ಭರ್ತಿಗೆ ಸಂದರ್ಶನವಾಗಿದೆ. ಬೇರೆ ರಾಜ್ಯಗಳ ವಿಶ್ವವಿದ್ಯಾಲಯದಲ್ಲಿ ಓದಿ ತಂದಿರುವ ಲೈಬ್ರರಿ ಸೈನ್ಸ್ ಸರ್ಟಿಫಿಕೇಟ್ ಸಿಂಧುತ್ವದ ಬಗ್ಗೆ ಆಯಾ ವಿಶ್ವವಿದ್ಯಾಲಯಗಳಿಗೆ ಕಳಿಸಿದ್ದು, ಕೆಲವು ಬಂದಿವೆ. ಇನ್ನೂ ಎರಡು ಸಿಂಧುತ್ವದ ಸರ್ಟಿಫಿಕೇಟ್ ಬಂದ ತಕ್ಷಣ ಶಾಶ್ವತ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗುವುದು.
ಭೀಮಪ್ಪ ಲಾಳಿ
ಜಿಪಂ ಉಪ ಕಾರ್ಯದರ್ಶಿ, ವಿಜಯನಗರ ಜಿಲ್ಲೆ
ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಜಿಪಂ ವ್ಯಾಪ್ತಿಗೆ ಸೇರಿವೆ. ಗ್ರಂಥಾಲಯದ ಮೇಲ್ವಿಚಾರಕ ಹುದ್ದೆ ಭರ್ತಿ ಜಿಪಂಗೆ ಒಳಪಟ್ಟಿದೆ. ಗ್ರಾಪಂ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಸರಬರಾಜು ಮಾಡುವುದಷ್ಟೇ ನಮ್ಮ ಕರ್ತವ್ಯ.
ಲಕ್ಷ್ಮೀ ಕಿರಣ
ಉಪನಿರ್ದೇಶಕಿ, ಗ್ರಂಥಾಲಯ ಇಲಾಖೆ, ಬಳ್ಳಾರಿ-ವಿಜಯನಗರ.
ಗ್ರಾಪಂ ಗ್ರಂಥಾಲಯದ ಮೇಲ್ವಿಚಾರಕರ ಹುದ್ದೆಗೆ ತಮಿಳುನಾಡು, ಗುಜರಾತ್, ದೆಹಲಿ ಇತರೆ ರಾಜ್ಯಗಳಿಂದ ಲೈಬ್ರರಿ ಸೈನ್ಸ್ ಸರ್ಟಿಫಿಕೇಟ್ ತಂದು ನೇಮಕವಾಗಿರುವ ಬಗ್ಗೆ ಸಂಶಯವಿದೆ. ಸಂಘದ ರಾಜ್ಯ ಮಟ್ಟದ ಪದಾಧಿಕಾರಿಗಳು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರ ಗಮನಕ್ಕೆ ತಂದಿದ್ದಾರೆ. ಸರ್ಟಿಫಿಕೇಟ್ ಬಗ್ಗೆ ಕೂಲಂಕಷ ಪರಿಶೀಲಿಸಲು ಸಚವಿರು ಆದೇಶಿಸಿದ್ದಾರೆ. ಆದ್ದರಿಂದ ಕೇವಲ ವಿಜಯನಗರ ಜಿಲ್ಲೆ ಅಷ್ಟೇ ಅಲ್ಲ. ಇಡೀ ಕರ್ನಾಟಕದಲ್ಲಿ ಎಲ್ಲ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಯೂ ನಿಂತಿದೆ.
ಹೆಸರು ಹೇಳಲಿಚ್ಛಿಸದ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಸದಸ್ಯ