ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿ ಪಡೆದಿರುವ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಬಿಗ್ಬಾಸ್’ 11ನೇ ಆವೃತ್ತಿ ಅಂತಿಮ ಘಟಕ್ಕೆ ತಲುಪಿದೆ. ಇಂದು ಮತ್ತು ನಾಳೆ (ಭಾನುವಾರ) ಫಿನಾಲೆ ನಡೆಯಲಿದೆ. 17 ವಾರಗಳ ಹೋರಾಟ, 20 ಸ್ಪರ್ಧಿಗಳ ಪೈಪೋಟಿಯಲ್ಲಿ ಅಂತಿಮವಾಗಿ ಆರು ಜನ ಮಾತ್ರ ಫಿನಾಲೆ ತಲುಪಿದ್ದು, ಇವರ ನಡುವೆ ‘ದೊಡ್ಮನೆ’ ಕಿರೀಟಕ್ಕಾಗಿ ನೇರ ಹಣಾಹಣಿ ನಡೆಯಲಿದೆ. ಈಗಾಗಲೇ ‘ಬಿಗ್ಬಾಸ್’ ನಿರೂಪಣೆಗೆ ನಟ ಸುದೀಪ್ ವಿದಾಯ ಹೇಳಿದ್ದು, ಈ ಭಾನುವಾರ ಪ್ರಸಾರವಾಗಲಿರುವ ಸಂಚಿಕೆಯೇ ಕೊನೆಯದ್ದಾಗಲಿದೆ. ಈ ಹಿನ್ನೆಲೆಯಲ್ಲಿ ಫಿನಾಲೆ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಕಳೆದ ವರ್ಷ ಸೆಪ್ಟೆಂಬರ್ 29ರಂದು ‘ಬಿಗ್ಬಾಸ್ ಕನ್ನಡ-11’ವು ‘ಸ್ವರ್ಗ ಹಾಗೂ ನರಕ’ ಎಂಬ ಥೀಮ್ನೊಂದಿಗೆ ಆರಂಭವಾಗಿತ್ತು. ಮೊದಲ ಹಂತದಲ್ಲಿ ಯಮುನಾ ಶ್ರೀನಿಧಿ, ಲಾಯರ್ ಜಗದೀಶ್, ರಂಜಿತ್, ಹಂಸ, ಮಾನಸಾ, ಅನುಷಾ, ಧರ್ಮ ಕೀರ್ತಿರಾಜ್, ಶಿಶಿರ್, ಗೋಲ್ಡ್ ಸುರೇಶ್, ಐಶ್ವರ್ಯಾ ಸಿಂದೋಗಿ, ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಧನರಾಜ್ ಆಚಾರ್ಯ, ತ್ರಿವಿಕ್ರಮ್, ಉಗ್ರಂ ಮಂಜು, ಭವ್ಯಾ ಗೌಡ, ಮೋಕ್ಷಿತಾ ಪೈ ಹೀಗೆ 17 ಸ್ಪರ್ಧಿಗಳು ‘ದೊಡ್ಮನೆ’ ಪ್ರವೇಶಿಸಿದ್ದರು. ಬಳಿಕ ಆಟದ ರೋಚಕತೆ ಹೆಚ್ಚಿಸಲು ಹನುಮಂತು, ಶೋಭಾ ಶೆಟ್ಟಿ ಹಾಗೂ ರಜತ್ ಕಿಶನ್ ಮೂವರು ‘ವೈಲ್ಡ್ ಕಾರ್ಡ್ ಎಂಟ್ರಿ’ ಪಡೆದಿದ್ದರು.
ಆರು ಜನ ಫಿನಾಲಿಸ್ಟ್ಗಳು: 20 ಸ್ಪರ್ಧಿಗಳಲ್ಲಿ ಫಿನಾಲೆಗೆ ಆರು ಜನ ತಲುಪಿದ್ದಾರೆ. ಹನುಮಂತು, ತ್ರಿವಿಕ್ರಮ್, ಮೋಕ್ಷಿತಾ ಪೈ, ಭವ್ಯಾ ಗೌಡ, ಉಗ್ರಂ ಮಂಜು ಹಾಗೂ ರಜತ್ ಕಿಶನ್ ಅಂತಿಮ ಸ್ಪರ್ಧೆಯಲ್ಲಿದ್ದಾರೆ. ‘ವೈಲ್ಡ್ ಕಾರ್ಡ್’ ಮೂಲಕ ಎಂಟ್ರಿ ಪಡೆದಿದ್ದ ಹನುಮಂತು ಹಾಗೂ ರಜತ್ ಕಿಶನ್ ಅಂತಿಮ ಹಂತ ತಲುಪಿರುವುದು ವಿಶೇಷ. ಈ ಆರು ಜನರ ಪೈಕಿ ವಿಜೇತರ ಹೆಸರನ್ನು ನಿರೂಪಕ, ನಟ ಸುದೀಪ್ ಭಾನುವಾರದ ಸಂಚಿಕೆಯಲ್ಲಿ ಘೋಷಿಸಲಿದ್ದಾರೆ.
ಕಿಚ್ಚನ ಕೊನೆಯ ಆವೃತ್ತಿ: ಕಳೆದ 11 ಸೀಸನ್ಗಳಿಂದ ನಿರೂಪಣೆ ಮಾಡಿಕೊಂಡು ಬಂದಿದ್ದ ನಟ ಸುದೀಪ್ಗೆ ಇದು ಕೊನೆಯ ‘ಬಿಗ್ಬಾಸ್’ ಆವೃತ್ತಿ. ಈಗಾಗಲೇ ಅವರು ನಿರೂಪಣೆಗೆ ವಿದಾಯ ಹೇಳಿದ್ದು, ಭಾನುವಾರ ಪ್ರಸಾರವಾಗಲಿರುವ ಸಂಚಿಕೆ ಅವರು ನಡೆಸಿಕೊಡುವ ಕೊನೆಯ ಬಿಗ್ಬಾಸ್ ಸಂಚಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಾಲತಾಣದಲ್ಲಿ ಅವಕಾಶ ನೀಡಿದ ಕಲರ್ಸ್ ವಾಹಿನಿ ಹಾಗೂ ಬಿಗ್ಬಾಸ್ ತಂಡಕ್ಕೆ ಧನ್ಯವಾದ ಹೇಳಿದ್ದರು.