ಚಿಕ್ಕಬಳ್ಳಾಪುರ: ರಾಜ್ಯಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಅಸಮತೋಲನ ನಿವಾರಣೆಯ ಕುರಿತ ಹೊಸ ಶಿಫಾರಸುಗಳ ವರದಿಯನ್ನು ಮುಂಬರುವ ಸೆಪ್ಟೆಂಬರ್ ಒಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿಯ ಅಧ್ಯಕ್ಷ ಪ್ರೊ ಎಂ ಗೋವಿಂದ ರಾವ್ ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದ ಸರ್.ಎಂ.ವಿ.ಸಭಾಂಗಣದಲ್ಲಿ ಕೈಗೊಂಡಿದ್ದ ಬೆಂಗಳೂರು ವಿಭಾಗ ಮಟ್ಟದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸಂವಾದ ಸಭೆ ಹಾಗೂ ಸಾರ್ವಜನಿಕ ಶಿಫಾರಸ್ಸುಗಳ ಸ್ವೀಕಾರದ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಮಿತಿಯು ರಾಜ್ಯಾದ್ಯಂತ ಸರ್ವೇಯಲ್ಲಿ ತೊಡಗಿದೆ. ಆರೋಗ್ಯ, ಶಿಕ್ಷಣ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿರುವ ಸೂಚ್ಯಂಕಗಳನ್ನು ಪರಿಗಣಿಸಿ, ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.
1956 ರಲ್ಲಿ ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಣೆಯಾದಾಗ ಹೈದರಾಬಾದ್&ಕರ್ನಾಟಕ, ಮದ್ರಾಸ್ ಕರ್ನಾಟಕ ಹಾಗೂ ಬಾಂಬೆ ಕರ್ನಾಟಕದ ಕೆಲವು ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಳಿಸಲಾಯಿತು. ಅಂದಿನ ಮೈಸೂರು ಪ್ರಾಂತ್ಯದ ಜಿಲ್ಲೆಗಳು ಆಗಲೇ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದ್ದವು. ಆದರೆ, ಹೈದರಬಾದ್&ಕರ್ನಾಟಕದ ಭಾಗವು ನಿಜಾಮರ ಅಳ್ವಿಕೆಗೆ ಒಳಪಟ್ಟಿತ್ತು. ಇವರು ಕೇವಲ ಹೈದರಾಬಾದ್ ಸುತ್ತಮುತ್ತಲ ಭಾಗಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಇಂದಿನ ಕಲ್ಯಾಣ ಕರ್ನಾಟಕದ ಭಾಗಗಳ ಕಡೆಗಣಿಸಿದ್ದರು. ಇದರಿಂದ ಪ್ರಾದೇಶಿಕ ಅಸಮಾತೋಲನ ಉಂಟಾಗಿದ್ದು ಇದನ್ನು ಮನಗಂಡ ಅಂದಿನ ಸರ್ಕಾರವು ಡಾ. ನಂಜುಂಡಪ್ಪರ ಸಮಿತಿಯನ್ನು ತಾರತಮ್ಯ ನಿವಾರಣೆಯ ಅಧ್ಯಯನಕ್ಕೆ ನೇಮಿಸಿತು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಆರ್.ವಿಶಾಲ್, ಸದಸ್ಯರಾದ ಡಾ. ಸಿದ್ದಪ್ಪ ಟಿ ಬಾಗಲಕೋಟೆ, ಕೆ.ಎನ್ ಸಂಗೀತಾ ಕಟ್ಟಿಮನಿ, ಡಾ ಎಂ.ಎಚ್.ಸೂರ್ಯನಾರಾಯಣ್, ಯೋಜನಾ ಇಲಾಖೆಯ ನಿರ್ದೇಶಕ ಚಂದ್ರಶೇಖರಯ್ಯ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್ ಭಾಸ್ಕರ್ ಮತ್ತಿತರರು ಇದ್ದರು.
ಬಾಕ್ಸ್
ಬೆಂಗಳೂರು ಪ್ರಾದೇಶಿಕ ವಿಭಾಗ ಚರ್ಚೆ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಬೆಂಗಳೂರು ಪ್ರಾದೇಶಿಕ ವಿಭಾಗ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಲಾಯಿತು. ಈ ಜಿಲ್ಲೆಗಳಿಂದ ಅಪರ ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಸಮಾಜ ಕಲ್ಯಾಣ, ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಹಕಾರ ಸಂಘಗಳ ಉಪನಿಬಂಧಕರು, ಸರ್ಕಾರೇತರ ಸಂಸ್ಥೆಗಳ ಸದಸ್ಯರು ಹಾಗೂ ವಿವಿಧ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.