ನವದೆಹಲಿ: ಪ್ರಾಂಶುಪಾಲರೊಬ್ಬರ ವಾರ್ನಿಂಗ್ನಿಂದಾಗಿ ವಿದ್ಯಾರ್ಥಿನಿಯೊಬ್ಬಳು ಪ್ರಾಣ ಕಳೆದುಕೊಂಡಂತಾಗಿದೆ. ಹುಡುಗಿ ದುರ್ವರ್ತನೆ ತೋರಿದ್ದಾಳೆ ಎಂದು ಆರೋಪಿಸಿ ಪ್ರಾಂಶುಪಾಲರು ಪಾಲಕರನ್ನು ಶಾಲೆಗೆ ಕರೆಸಿ ದೂರು ಹೇಳಿದ್ದಲ್ಲದೆ, ಆಕೆಯನ್ನು ಶಾಲೆಯಿಂದ ಟಿಸಿ ಕೊಟ್ಟು ಕಳುಹಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಇದರಿಂದ ಬೇಸತ್ತ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಖಾಸಗಿ ಶಾಲೆಯೊಂದರಲ್ಲಿ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ ಉದ್ದವಾದ ಉಗುರು ಬಿಟ್ಟಿದ್ದಕ್ಕೆ, ದೊಡ್ಡ ಕಿವಿಯೋಲೆ ಹಾಕಿಕೊಂಡಿದ್ದಕ್ಕೆ ಹಾಗೂ ಜತೆಯಲ್ಲಿ ಮೊಬೈಲ್ ಫೋನ್ ಇರಿಸಿಕೊಂಡಿದ್ದಕ್ಕೇ ದುರ್ವರ್ತನೆ ಎಂದು ಆರೋಪಿಸಿರುವ ಪ್ರಾಂಶುಪಾಲ, ಆಕೆಯ ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ಎರಡೆರಡು ಸಲ ಲಸಿಕೆ ಪಡೆದರೂ ಕರೊನಾ ಬಂತು!; ವ್ಯಾಕ್ಸಿನ್ ತಗೊಂಡ ಜಿಲ್ಲಾಧಿಕಾರಿಗೂ ಸೋಂಕು!
ಏ. 8ರಂದು ಹುಡುಗಿಯ ತಂದೆ-ತಾಯಿಯನ್ನು ಕರೆಸಿದ್ದ ಪ್ರಿನ್ಸಿಪಾಲ್ ಎಚ್ಚರಿಕೆ ಕೊಟ್ಟು ಕಳಿಸಿದ್ದರು. ಮಾರನೇ ದಿನ ಅದೇ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿರುವ ಮಗನನ್ನೂ ಕರೆದುಕೊಂಡು ಪ್ರಾಂಶುಪಾಲರನ್ನು ಭೇಟಿಯಾದ ಪಾಲಕರು, ತಮ್ಮ ಪುತ್ರಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳದಂತೆ ವಿನಂತಿಸಿಕೊಂಡಿದ್ದರು. ಆದರೆ ಇದಕ್ಕೆ ಸ್ಪಂದಿಸದ ಪ್ರಾಂಶುಪಾಲ, ನಿಮ್ಮ ಇಬ್ಬರು ಮಕ್ಕಳನ್ನೂ ಶಾಲೆಯಿಂದ ತೆಗೆಯಲಾಗುವುದು ಎಂದು ಗದರಿದ್ದಾರೆ. ಏ. 9ರಂದು ಮನೆಗೆ ಮರಳಿದ ಪಾಲಕರು ನಡೆದ ವಿಷಯ ತಿಳಿಸಿ, ನಾಳೆ ಇನ್ನೊಮ್ಮೆ ಕಾಲೇಜಿಗೆ ಮನವಿ ಮಾಡಿಕೊಳ್ಳುವುದಾಗಿ ಪುತ್ರಿಗೆ ಸಮಾಧಾನ ಹೇಳಿದ್ದರು. ಆದರೆ ಅಂದು ಅದಕ್ಕೆ ಏನೂ ಹೇಳದ ವಿದ್ಯಾರ್ಥಿನಿ ಊಟ ಕೂಡ ಮಾಡಿರಲಿಲ್ಲ. ಒಳಗೆ ರೂಮ್ಗೆ ಹೋಗಿದ್ದವಳು ಊಟ-ತಿಂಡಿಗೂ ಬಂದಿರಲಿಲ್ಲ. ಏನಾಯಿತು ಎಂದು ಹೋಗಿ ನೋಡಿದಾಗ ಫ್ಯಾನ್ಗೆ ನೇಣು ಹಾಕಿಕೊಂಡಿದ್ದಳು ಎಂದು ಹುಡುಗಿಯ ಮಾವ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ. ಅಂದಹಾಗೆ ಈ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ಏ. 9ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. (ಏಜೆನ್ಸೀಸ್)
ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ ಎಂಬ ಚಿಂತೆಯೇ?; ಇಲ್ಲಿದೆ ನೋಡಿ ರಿಯಲ್ ಟೈಮ್ ಮಾಹಿತಿ
ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿದ ಮರ; ಗುಡುಗು-ಸಿಡಿಲಿನೊಂದಿಗೆ ಭಾರಿ ಮಳೆ