ಚನ್ನಗಿರಿ: ಪಟ್ಟಣದಲ್ಲಿ ಸೋಮವಾರ ತಾಲೂಕು ಸ್ತ್ರೀಶಕ್ತಿ ಭವನ ಆವರಣದ ಗಿಡಗಂಟೆ ತೆರವುಗೊಳಿಸುವ ಮೂಲಕ ಕಟ್ಟಡದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ.

ಪತ್ರಿಕೆಯಲ್ಲಿ ಭಾನುವಾರ ‘ನಿರ್ವಹಣೆಯಿಲ್ಲದೆ ಸೊರಗಿದ ಸ್ತ್ರೀಶಕ್ತಿ ಭವನ’ ಶೀರ್ಷಿಕೆಯಡಿ ಪ್ರಕಟಗೊಂಡ ವರದಿಗೆ ಶಿಶು ಮತ್ತು ಮಹಿಳಾ ಕಲ್ಯಾಣ ಇಲಾಖೆ ಎಚ್ಚೆತ್ತುಕೊಂಡಿದೆ.
ಶಿಶು ಮತ್ತು ಮಹಿಳಾ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿಯು ಸಿಬ್ಬಂದಿ ಜತೆಗೆ ಆಗಮಿಸಿ ಜೆಸಿಬಿ ಮೂಲಕ ಕಟ್ಟಡದ ಸುತ್ತಲೂ ಇರುವ ಗಿಡಗಂಟೆ ತೆರವುಗೊಳಿಸಿದರು. ಕಟ್ಟಡದ ಕಾಪೌಂಡ್ ಒಳಗೆ ಪ್ರತಿದಿನ ವಾಹನ ರ್ಪಾಂಗ್ ಮಾಡುವವರಿಗೆ, ಇಲ್ಲಿ ವಾಹನ ನಿಲ್ಲಿಸಲು ಅವಕಾಶವಿಲ್ಲ. ನಿಲುಗಡೆ ಮಾಡಿದರೆ ಕಾನೂನುಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿ ವಾಹನಗಳನ್ನು ತೆರವುಗೊಳಿಸಿದರು.
ಕಟ್ಟಡದ ಬೀಗ ತೆಗೆದು ಕಸ ಹೊಡೆಸಿ ಸಂಪೂರ್ಣ ಕಟ್ಟಡವನ್ನು ನೀರು ಹಾಕಿ ತೊಳೆಯಲಾಯಿತು. ಕಟ್ಟಡದ ಸುತ್ತಲು ಇರುವ ಮನೆಯ ಮಾಲೀಕರಿಗೆ ಯಾವುದೇ ಕಾರಣಕ್ಕೂ ಇಲ್ಲಿ ಕಸ ಹಾಕಬಾರದು, ಸಿಸಿ ಕ್ಯಾಮರಾ ಅಳವಡಿಸಲಾಗುತ್ತದೆ. ಪುರಸಭೆ ತ್ಯಾಜ್ಯ ವಾಹನದಲ್ಲಿ ಕಸ ಹಾಕುವಂತೆ ತಿಳಿಸಿದರು.
ಸಂತೇ ಮೈದಾನದಲ್ಲಿ ಪುರಸಭೆಗೆ ಸೇರಿದ ನಿವೇಶನದಲ್ಲಿ ನಿರ್ವಿುಸಿದ ಸ್ತ್ರೀಶಕ್ತಿ ಭವನ ಕಟ್ಟಡಕ್ಕೆ ಮರು ಜೀವ ಬಂದಂತಾಗಿದೆ ಎಂದು ಸಾರ್ವಜನಿಕರು ಪ್ರಶಂಸಿಸಿದರು.
ಸ್ತ್ರೀಶಕ್ತಿ ಒಕ್ಕೂಟದ ಭವನದ ಸ್ವಚ್ಛತೆ ಕಾಪಾಡಲಾಗುವುದು. ಭವನದ ರಿಪೇರಿ ಹಾಗೂ ಸುಣ್ಣಬಣ್ಣ ಮಾಡಿಸಲು ಶಾಸಕರಿಗೆ ಮನವಿ ನೀಡಲಾಗಿದೆ. ದುರಸ್ತಿ ನಂತರ ಒಕ್ಕೂಟದ ಮಹಿಳೆಯರು ಉಪಯೋಗಿಸಲು ನೀಡಲಾಗುವುದು. ಕಟ್ಟಡದಲ್ಲಿ ನಡೆಯುವ ಅಕ್ರಮ ಚಟುವಟಿಕೆ ತಡೆಯಲು ಪೊಲೀಸ್ ಠಾಣೆಗೆ ಮನವಿ ನೀಡಲಾಗುತ್ತದೆ.
-ನಿರ್ಮಲಾಬಾಯಿ, ಶಿಶು ಮತ್ತು ಮಹಿಳಾ ಕಲ್ಯಾಣಾಧಿಕಾರಿ.