ಯಲ್ಲಾಪುರ: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಮಹಿಳೆಯೊಬ್ಬಳ ಆಭರಣ ಕದ್ದು ಪರಾರಿಯಾಗುತ್ತಿದ್ದ ಮೂವರು ಕಳ್ಳರನ್ನು ತಾಲೂಕಿನ ಹುಟುಕಮನೆ ಬಳಿ ಪೊಲೀಸರು ಬಂಧಿಸಿದ್ದಾರೆ.

ಮೈನುದ್ದೀನ್, ಸೂರಜ್ ಹಾಗೂ ಗೌರೀಶ ಬಂಧಿತರು. ಇವರು ಬ್ರಹ್ಮಾವರದಲ್ಲಿ ಮಹಿಳೆಯೊಬ್ಬರ ಎರಡೂವರೆ ತೊಲ ಬಂಗಾರ ಕದ್ದುಕೊಂಡು ಯಲ್ಲಾಪುರದತ್ತ ಬಂದಿದ್ದರು. ಪ್ರಕರಣ ದಾಖಲಿಸಿಕೊಂಡು, ಬೆನ್ನತ್ತಿದ ಪೊಲೀಸರು ಯಲ್ಲಾಪುರ ಪೊಲೀಸರಿಗೆ ಮಾಹಿತಿ ನೀಡಿದರು. ತಟಗಾರ, ಹುಟುಕಮನೆ ಭಾಗಕ್ಕೆ ಅವರ ಕಾರು ಹೋದ ವಿಷಯ ತಿಳಿದ ಪೊಲೀಸರು, ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಹುಟುಕಮನೆ ಹಾಗೂ ತಟಗಾರ ಗ್ರಾಮಸ್ಥರು ಆ ಭಾಗದಲ್ಲಿ ಪೊಲೀಸರೊಂದೊಗೆ ಹುಟುಕಾಟ ಆರಂಭಿಸಿದರು. ಹುಟುಕಮನೆ ಬಳಿಯ ಕಚ್ಚಾ ರಸ್ತೆಯಲ್ಲಿ ದರೋಡೆಕೋರರ ಕಾರು ಗಟಾರಕ್ಕಿಳಿದಿದ್ದು, ಆ ವೇಳೆ ಪೊಲೀಸರು ಹಾಗೂ ಗ್ರಾಮಸ್ಥರ ಬಳಿ ಸಿಕ್ಕಿಬಿದ್ದಿದ್ದಾರೆ.
ಮೂವರನ್ನು ಬಂಧಿಸಿದ ಪೊಲೀಸರು ಬ್ರಹ್ಮಾವರಕ್ಕೆ ಅವರನ್ನು ಕರೆದೊಯ್ದಿದ್ದಾರೆ.