ಮಾಯಕೊಂಡ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿದ್ದ ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆ ತಾಲೂಕಿನ ಶ್ರೀರಂಗನಮಟ್ಟಿ (ಗುಡ್ಡದ ಹಟ್ಟಿ) ಹಾಗೂ ಗೊಲ್ಲರಹಟ್ಟಿ ಗ್ರಾಮಗಳಿಗೆ ರಾಜ್ಯ ಸಾರಿಗೆ ಬಸ್ ಸಂಚಾರಕ್ಕೆ ಸೋಮವಾರ ಚಾಲನೆ ನೀಡಿ, ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಪಡೆಯಲು ಒಂದೂರಿನಿಂದ ಮತ್ತೊಂದು ಗ್ರಾಮಕ್ಕೆ ತೆರಳುವುದು ಅತ್ಯವಶ್ಯಕವಾಗಿದೆ. ಅದರಂತೆ ಅವರ ಓದಿಗೆ ಅನುಕೂಲ ಕಲ್ಪಿಸಲು ಬಸ್ ವ್ಯವಸ್ಥೆ ಅನಿವಾರ್ಯವಾಗಿದೆ. ಸಾರಿಗೆ ಸಚಿವರ ನಿರ್ದೇಶನದ ಮೇರೆಗೆ ಈ ದಿನ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ ಎಂದರು.
ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯಕ್ಕೆ ನನ್ನ ಅಧಿಕಾರಾವಧಿಯಲ್ಲಿ ಮೊದಲ ಆದ್ಯತೆ ನೀಡಲಾಗುವುದು. ಮಾಯಕೊಂಡ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗೆ 8 ಕೋಟಿ ರೂ. ಮಂಜೂರಾಗಿದೆ. ಶೀಘ್ರವೇ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಳ್ಳುತ್ತವೆ. ಗುಡ್ಡದಹಟ್ಟಿ ಗ್ರಾಮವು ಕಂದಾಯ ಗ್ರಾಮವಾಗಿ ಘೋಷಣೆಯಾಗಿದೆ. ಜಿಲ್ಲಾಧಿಕಾರಿ ಮತ್ತು ಸಿಇಒ ಗ್ರಾಮದ ಶಾಲೆ, ಅಂಗನವಾಡಿಯನ್ನು ಪರಿಶೀಲಿಸಿದ್ದಾರೆ. ಗ್ರಾಮದ ಅಗತ್ಯಗಳನ್ನು ಪಟ್ಟಿಮಾಡಿ ಸೌಲಭ್ಯಗಳನ್ನು ಒದಗಿಸಲು ಶೀಘ್ರವೇ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ದಾವಣಗೆರೆ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗಿಂತ ಮಾಯಕೊಂಡ ಕ್ಷೇತ್ರದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಗುಡ್ಡದಹಟ್ಟಿ ಗ್ರಾಮಕ್ಕೆ ಅಗತ್ಯ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಲಾಗುವುದು ಎಂದರು.
ಮುಂದಿನ ತಿಂಗಳಿಂದ ಗುಡ್ಡದಹಟ್ಟಿ ಗ್ರಾಮದಲ್ಲೇ ಪಡಿತರ ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಈ ಎರಡೂ ಗ್ರಾಮಗಳಿಗೆ ಒಂದು ಮತಗಟ್ಟೆ ತೆರೆಯಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುತ್ತಾರೆ ಎಂದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಮಾತನಾಡಿದರು. ಹೊನ್ನನಾಯಕನಹಳ್ಳಿ ಮಲ್ಲೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ನರಗನಹಳ್ಳಿ ಗ್ರಾಪಂ ಅಧ್ಯಕ್ಷೆ ಆಶಾ ನಾಗರಾಜ್, ಡಿಡಿಪಿಐ ಕೊಟ್ರೇಶ್, ತಹಸೀಲ್ದಾರ್ ಡಾ. ಅಶ್ವತ್ಥ್, ತಾಲೂಕು ಪಂಚಾಯಿತಿ ಇಒ ರಾಮಭೋವಿ, ಕೆಎಸ್ಆರ್ಟಿಸಿ ಡಿಸಿ ಸಿದ್ದೇಶ್ವರ, ಮುಖಂಡರಾದ ರೇವಣನಾಯ್ಕ, ಲಚ್ಚನಾಯ್ಕ, ಸುರೇಶ್ ನರಗನಹಳ್ಳಿ, ಎಚ್.ಎಂ.ಚಂದ್ರಪ್ಪ, ಸಿದ್ದೇಶ್, ಕಾಂತರಾಜ್, ಶಾಂತಪ್ಪ ಪೂಜಾರ್, ಕೃಷ್ಣರಾಜ, ಜಯಪ್ಪ, ಶಿವಣ್ಣ, ಹೊನ್ನನಾಯಕನಹಳ್ಳಿ ಎಚ್.ಜಿ.ದೇವರಾಜ್, ದೇವೇಂದ್ರಪ್ಪ, ಕಿರಣ್ಕುಮಾರ್ ಇತರರಿದ್ದರು.
ವಿಜಯವಾಣಿ ವರದಿ ಪರಿಣಾಮ
ದಾವಣಗೆರೆ ತಾಲೂಕಿನ ಗುಡ್ಡದ ಹಟ್ಟಿ, ಗೊಲ್ಲರಹಟ್ಟಿ ಗ್ರಾಮಗಳಿಗೆ ಬಸ್ ಸಮಸ್ಯೆ ಬಗ್ಗೆ ಜುಲೈ 5 ರಂದು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಈ ಬಗ್ಗೆ ಮಾಹಿತಿ ತಿಳಿದುಕೊಂಡ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.
ಸೋಮವಾರ ನಡೆದ ಕಾರ್ಯಕ್ರಮದ ವೇಳೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಮಾತನಾಡಿ, ನರಗನಹಳ್ಳಿ ಗ್ರಾಮ ಪಂಚಾಯಿತಿಯ ಗುಡ್ಡದಹಟ್ಟಿ- ಗೊಲ್ಲರಹಟ್ಟಿ ಗ್ರಾಮಗಳಿಗೆ ಸಾರಿಗೆ ಬಸ್ ಸೌಕರ್ಯ ಕಲ್ಪಿಸಿ ಎನ್ನುವ ವಿಜಯವಾಣಿ ವರದಿಯನ್ನು ಗಮನಿಸಿದ್ದೆ ಎಂದು ತಿಳಿಸಿದರು.