ಕ.ರಾ.ಸ.ಮ. ನಿರ್ದೇಶಕ ಲೋಕಪ್ಪ ಗೌಡ ಆಶಯ
ಉಡುಪಿಯಲ್ಲಿ ಸಹಕಾರ ತರಬೇತಿ ಉದ್ಘಾಟನೆ
ವಿಜಯವಾಣಿ ಸುದ್ದಿಜಾಲ ಉಡುಪಿ
ನಬಾರ್ಡ್ನ ಶೇ. 58 ಅನುದಾನ ಕಡಿತದಿಂದಾಗಿ ಕೃಷಿ, ಸಹಕಾರ ಕ್ಷೇತ್ರಕ್ಕೆ ಸಮಸ್ಯೆಯಾಗಲಿದ್ದು ಪರ್ಯಾಯ ವ್ಯವಸ್ಥೆಯ ಚಿಂತನೆಯಾಗಬೇಕಿದೆ. ಸಹಕಾರ ಕಾಯಿದೆ ತಿದ್ದುಪಡಿ ಗೊಂದಲ, ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳ ಗ್ರಾಮೀಣ ಶಾಖೆಗಳೂ ಈಗ ಪೈಪೋಟಿ ನೀಡತೊಡಗಿದ್ದು, ಸಹಕಾರಿಗಳ ಜವಾಬ್ದಾರಿ ಹೆಚ್ಚಿದೆ. ಗ್ರಾಹಕರು ಪಡೆದ ಸಾಲ ಸಕಾಲಕ್ಕೆ ತೀರಿಸುವ ಪ್ರವೃತ್ತಿ ಬೆಳೆಸಿಕೊಂಡರೆ ಸಹಕಾರ ಕ್ಷೇತ್ರ ಇನ್ನಷ್ಟು ಯಶಸ್ವಿಯಾಗಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ.ಸಿ. ಲೋಕಪ್ಪ ಗೌಡ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ದಿ ಓಷಿಯನ್ ಪರ್ಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಪತ್ತಿನ ಸಹಕಾರ ಸಂಘಗಳ ಎಲ್ಲ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಫೆ.15ರಂದು ಆಯೋಜಿಸಿದ್ದ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿರುದ್ಯೋಗಿಗಳಿಗೆ ಆರ್ಥಿಕ ಸಹಕಾರ
ರಾಜ್ಯ ಸಹಕಾರ ಮಹಾಮಂಡಳದ ನಾಮ ನಿರ್ದೇಶಿತ ನಿರ್ದೇಶಕ ಎನ್.ಗಂಗಣ್ಣ ಮಾತನಾಡಿ, ಶೋಷಣೆಮುಕ್ತ ಸಮಾಜ ನಿರ್ಮಾಣ ಇಂದಿನ ಆದ್ಯತೆಯಾಗಿದೆ. ಆ ನಿಟ್ಟಿನಲ್ಲಿ ನಿರುದ್ಯೋಗಿಗಳಿಗೆ ಸ್ವಂತ ಉದ್ಯಮ ಆರಂಭಿಸಲು ಸಹಕಾರ ಸಂಘಗಳಿಂದ ಬಂಡವಾಳ ಒದಗಿಸುವ ಕೆಲಸವಾಗಬೇಕಿದೆ ಎಂದರು.
ಸಹಕಾರ ಮಹಾಮಂಡಳದ ನಿರ್ದೇಶಕ ರಾಮ ರೆಡ್ಡಿ, ಶಿವಪ್ರಸಾದ್, ವೃತ್ತಿಪರ ನಿರ್ದೇಶಕಿ ಕೆ.ಸಿ. ನಾಗರತ್ನಾ, ಸಹಕಾರ ಸಂಘಗಳ ಉಪನಿಬಂಧಕಿ ಕೆ.ಆರ್. ಲಾವಣ್ಯಾ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಸುಕನ್ಯಾ, ಯೂನಿಯನ್ ಉಪಾಧ್ಯಕ್ಷ ಅಶೋಕಕುಮಾರ್ ಬಲ್ಲಾಳ್, ನಿರ್ದೇಶಕರಾದ ಎಚ್.ಗಂಗಾಧರ ಶೆಟ್ಟಿ, ಸುಧೀರ್ ವೈ., ಪ್ರದೀಪ್ ಯಡಿಯಾಲ್, ಕರುಣಾಕರ್ ಶೆಟ್ಟಿ, ಅಲೆವೂರು ಹರೀಶ್ ಕಿಣಿ, ಅರುಣಕುಮಾರ್ ಹೆಗ್ಡೆ, ಕೊಡಗು ಜಿಲ್ಲಾ ಸಹಕಾರ ಇಲಾಖೆಯ ಜಂಟಿ ನಿರ್ದೇಶಕ ಪ್ರವೀಣ್ ನಾಯಕ್ ಉಪಸ್ಥಿತರಿದ್ದರು.
ಸಹಕಾರ ಚರ್ಚಾ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲಾ ಮಟ್ಟದಲ್ಲಿ ಪ್ರಥಮ, ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ ದಿವ್ಯಾ ಅವರನ್ನು ಸನ್ಮಾನಿಸಲಾಯಿತು.
ಸದಾನಂದ ಆಚಾರ್ಯ ಪ್ರಾರ್ಥಿಸಿದರು. ಶ್ರೀಧರ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೂಷಾ ಕೋಟ್ಯಾನ್ ಸ್ವಾಗತಿಸಿದರು.
ಬಲವಂತದ ವಸೂಲಿ ಆಗಕೂಡದು
ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ, ಮೈಕ್ರೋ ಫೈನಾನ್ಸ್ ಕಾಯಿದೆ ಸಹಕಾರ ಕ್ಷೇತ್ರಕ್ಕೆ ಅನ್ವಯಿಸುವುದಿಲ್ಲ. ಆದರೂ ಕಟ್ಬಾಕಿ ಇರುವವರಿಂದ ಬಲವಂತದಿಂದ ಸಾಲ ವಸೂಲಿ ಮಾಡಬಾರದು. ಸಹಕಾರ ಇಲಾಖಾ ನ್ಯಾಯಾಲಯದ ಕಾನೂನು ಮೂಲಕ ಸಾಲ ವಸೂಲಿಗೆ ಅವಕಾಶವಿದೆ. ಜಿಲ್ಲೆಯಲ್ಲಿ 730 ಸಹಕಾರ ಸಂಸ್ಥೆಗಳಲ್ಲಿದ್ದು, 3,800 ಕೋಟಿ ರೂ. ಠೇವಣಿ ಇದೆ. ಆದರೆ, ಸಹಕಾರ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ ಎಂದರು.
ಸಹಕಾರ ರಂಗಕ್ಕೂ ಸೈಬರ್ ಕ್ರೈಂ ಕಾಲಿಟ್ಟಿದ್ದು ಖಾತೆಗಳಲ್ಲಿರುವ ದುಡ್ಡಿಗೆ ಭದ್ರತೆ ಅತ್ಯಗತ್ಯವಾಗಿದೆ. ಗ್ರಾಹಕರೂ ಸಹ ಈ ವಿಚಾರವಾಗಿ ಸದಾ ಜಾಗೃತರಾಗಿರಬೇಕು. ಬ್ಯಾಂಕ್ಗಳಲ್ಲಿ ದರೋಡೆ ಪ್ರಕರಣವೂ ಹೆಚ್ಚುತ್ತಿದ್ದು, ಎಲ್ಲ ಸಹಕಾರ ಸಂಸ್ಥೆಗಳು ಸಿಸಿಟಿವಿ, ಸೈರನ್, ಭದ್ರತಾ ಸಿಬ್ಬಂದಿ ನೇಮಕ ಮಾಡಬೇಕು.
| ಬಿ.ಸಿ. ಲೋಕಪ್ಪ ಗೌಡ. ಕ.ರಾ.ಸ.ಮ. ನಿರ್ದೇಶಕ