ಗೋಕರ್ಣ: ಇಲ್ಲಿನ ಪುರಾಣ ಪ್ರಸಿದ್ಧ ಶ್ರೀಭದ್ರಕಾಳಿ ಮಂದಿರದಲ್ಲಿ ಎಂಟು ದಿನ ಆಯೋಜಿತವಾಗುವ ಪ್ರಧಾನ ಗ್ರಾಮದೇವತೆಯ ವಾರ್ಷಿಕ ಬಂಡಿಹಬ್ಬ ಏ.30ರಿಂದ ಶೇಷೆ ಹಾಕುವುದರೊಂದಿಗೆ ವಿಧ್ಯುಕ್ತವಾಗಿ ಪಾರಂಭವಾಗುವುದು.

ಅಂದು ರಥಬೀದಿಯ ಕಳಸದ ಮನೆಯಲ್ಲಿ ಶ್ರೀಭದ್ರಕಾಳಿ ಮತ್ತು ಪರಿವಾರ ದೇವರ ಕಳಸ ಪ್ರತಿಷ್ಠಾಪನೆ ನಡೆದು ವಿವಿಧ ಪಾರಂಪರಿಕ ಸ್ಥಳಗಳಿಗೆ ಮೆರವಣಿಗೆ ಪ್ರಾರಂಭವಾಗುವುದು. ಮೇ 2ರಂದು ಶ್ರೀದೇವಿ ಕಳಸ ಸಮುದ್ರ ತೀರದ ಬಳಿಯ ಶ್ರೀಮಾಣೇಶ್ವರ ಮಂದಿರಕ್ಕೆ ಭೇಟಿಯಿತ್ತು ವಿವಿಧ ಸೇವೆ ಪಡೆಯುವುದು. ಜತೆಗೆ ಅಂದು ಶ್ರೀದೇವಿ ಕಳಸವು ಶ್ರೀ ಮಹಾಗಣಪತಿ ಮತ್ತು ಆತ್ಮಲಿಂಗ ಸನ್ನಿಧಿ ಶ್ರೀಮಹಾಬಲೇಶ್ವರ ಮಂದಿರದಲ್ಲಿ ಶ್ರೀದೇವರ ದರ್ಶನ ಮತ್ತು ಮಹಾಮಂಗಳಾರತಿ ಸ್ವೀಕರಿಸುವುದು. ಬಂಡಿಹಬ್ಬದ ನಿಮಿತ್ತ ಪ್ರತಿ ರಾತ್ರಿ ಆಡುಕಟ್ಟೆಯಲ್ಲಿ ಆಯೋಜಿತವಾಗುವ ಮುಖಹಬ್ಬದಲ್ಲಿ ಶ್ರೀದೇವಿಯ ವಿವಿಧ ಪರಿವಾರ ದೇವರ ಪ್ರದರ್ಶನ ಕೈಗೊಳ್ಳಲಾಗುವುದು.
ಮೇ 6ರಂದು ಬಂಡಿಹಬ್ಬದ ಪ್ರಧಾನ ಆಚರಣೆಯಾದ ಬಂಡಿತೇರು ಉತ್ಸವ ನಡೆಯಲಿದೆ. ಮೇ 7ರಂದು ಹರಕೆ ಒಪ್ಪಿಸುವ ಕಾರ್ಯವಿದ್ದು ಅಂದು ಸಾವಿರಾರು ಭಕ್ತರು ಶ್ರೀಭದ್ರಕಾಳಿ ಮಂದಿರದಲ್ಲಿ ಹರಕೆ ಮತ್ತು ಕಾಣಿಕೆ ಸಮರ್ಪಿಸುವರು. ಇದರೊಂದಿಗೆ ವಾರ್ಷಿಕ ಬಂಡಿಹಬ್ಬ ಉತ್ಸವ ಮಂಗಳವಾಗುವುದು.