ಸಿರಗುಪ್ಪ: ತೆಕ್ಕಲಕೋಟೆಯ ಶ್ರೀ ವರವಿನ ಮಲ್ಲೇಶ್ವರ ಸ್ವಾಮಿ ರಥೋತ್ಸವ ಗುರುವಾರ ಅದ್ದೂರಿಯಾಗಿ ಜರುಗಿತು.


ಜಾತ್ರೆ ನಿಮಿತ್ತ ಶ್ರೀ ಮಲ್ಲೇಶ್ವರ ಸ್ವಾಮಿಗೆ ಬೆಳಗ್ಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿ ಪೂಜೆ ಮಾಡಲಾಯಿತು. ವಿವಿಧ ಹೂಗಳಿಂದ ವಿಶೇಷವಾಗಿ ಅಲಂಕರಿಸಿ ಮಹಾಮಂಗಳಾರತಿ ಮಾಡಿದ ನಂತರ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಭಕ್ತರು ಸಾಲಾಗಿ ನಿಂತು ಸ್ವಾಮಿ ದರ್ಶನ ಪಡೆದು ಹೂ, ಹಣ್ಣು, ಕಾಯಿ ಸಮರ್ಪಿಸಿದರು.
ರಥೋತ್ಸವಕ್ಕೂ ಮುನ್ನ ರಥದ ಮುಂದೆ ಹೋಮ, ಹವನ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಅರ್ಚಕರಿಂದ ಬಲಿಹರಣ ಕಾರ್ಯಕ್ರಮದ ನಂತರ ಸಕಲ ಮಂಗಳವಾದ್ಯಗಳೊಂದಿಗೆ ರಥ ಎಳೆಯಲಾಯಿತು.
ನವವಿವಾಹಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಪ್ರದಾಯದಂತೆ ರಥೋತ್ಸವವನ್ನು ಕಣ್ತುಂಬಿಕೊಂಡರು. ಸಿರಗುಪ್ಪ, ಬಳ್ಳಾರಿ, ತೆಕ್ಕಲಕೋಟೆ, ಉಪ್ಪಾರಹೊಸಳ್ಳಿ, ಬಲಕುಂದಿ, ಹಳೇಕೋಟೆ, ರಾರಾವಿ, ಗಂಗಾವತಿ ಮತ್ತು ಸೀಮಾಂಧ್ರ ಪ್ರದೇಶದ ವಿವಿಧ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.