ಹುಬ್ಬಳ್ಳಿ: ಇಲ್ಲಿಯ ಭವಾನಿ ನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಬುಧವಾರ ಮಂತ್ರಾಲಯದ ಪೀಠಾಧೀಪತಿ ಶ್ರೀ ಸುಭುದೇಂದ್ರತಿರ್ಥರು ಹಾಗೂ ಸೋದೆಯ ಶ್ರೀ ವಾದಿರಾಜ ಮಠದ ಪೀಠಾಧೀಪತಿ ಶ್ರೀ ವಿಶ್ವವಲ್ಲಭತೀರ್ಥರು ಸಂಸ್ಥಾನ ಪೂಜೆ ನೆರವೇರಿಸಿದರು.

ಶ್ರೀಮಠದ ಜಯತೀರ್ಥ ಸಭಾ ಭವನದಲ್ಲಿ ಬೆಳಗ್ಗೆ 11ಕ್ಕೆ ಆರಂಭವಾದ ಪೂಜಾ ವಿಧಿ ವಿಧಾನಗಳು ಸುಮಾರು ಎರಡು ತಾಸಿನವರೆಗೆ ನಡೆದವು.
ಉಭಯ ಶ್ರೀಗಳು ಭಕ್ತ ಸಮೂಹದ ಮಧ್ಯೆ ಶ್ರೀಮನ್ ಮೂಲ ರಾಮನ ಪ್ರತಿಮೆಯ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಶ್ರೀ ಧೂಳಖೇಡ ನಾರಾಯಣಸ್ವಾಮಿ ಹಾಗೂ ವಿವಿಧ ಪಂಡಿತರು ಪ್ರವಚನ ನೀಡಿದರು.
ಮೂಲ ರಾಮನ ಅನುಸಂಧಾನ ಹೇಗೆ ಮಾಡಬೇಕು ಎಂಬುದನ್ನು ವಾದಿರಾಜ ಸ್ವಾಮೀಜಿ ಹೇಳಿದ್ದಾರೆ. ಅನುಸಂಧಾನ ಹಾಗೂ ಆರಾಧನೆ ಹೇಗೆ ಇರಬೇಕು, ಚಿಂತನೆ ಯಾವ ರೀತಿ ಇರಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಜೀವನದಲ್ಲಿ ಎದುರಾಗುವ ದುರಿತಗಳನ್ನು ಹೇಗೆ ಪರಿಹಾರ ಮಾಡಿಕೊಳ್ಳಬೇಕೆಂಬುದನ್ನು ಶ್ರೀರಾಮ ತಿಳಿಸಿಕೊಟ್ಟಿದ್ದಾನೆ. ಅಂತಹ ಶ್ರೀಮನ್ ಮೂಲ ರಾಮನ ಪ್ರತಿಮೆಯ ಪೂಜೆಯು ಬಹಳ ಮಹತ್ವವನ್ನು ಹೊಂದಿದೆ ಎಂದು ಪಂಡಿತರು ಹೇಳಿದರು.
ಇದು ಸಾಧಾರಣ ಪೂಜೆಯಲ್ಲ. ಮಹಾತ್ಮರಿಂದ ಪೂಜೆಗೊಂಡ ಪ್ರತಿಮೆಗಳ ಪೂಜೆ ಯಾವ ಊರಿನಲ್ಲಿ ನಡೆಯುತ್ತದೆಯೋ ಅಲ್ಲಿನ ಭಕ್ತರು ನಾಲ್ಕು ಪುರುಷಾರ್ಥಗಳನ್ನು ಪಡೆಯಲು ಅವಕಾಶವಿದೆ. ಇವು ಪರಂಪರಾಗತ ಅದ್ಬುತ ಪ್ರತಿಮೆಗಳು. ಇವುಗಳ ಪೂಜೆಯಿಂದ ಸಮಾಜ ಶಾಂತಿಯುತವಾಗಿರುತ್ತದೆ. ಮನೆಮನೆಗಳಲ್ಲಿ ಶಾಂತಿ, ಸಹೃದಯತೆ ಬೆಳೆಯುತ್ತದೆ ಎಂದು ಪ್ರತಿಪಾದಿಸಿದರು.
ಶ್ರೀಮಠದ ಆಡಳಿತ ಮಂಡಳಿ ಪದಾಧಿಕಾರಿಗಳು, ನೂರಾರು ಭಕ್ತರು ಪಾಲ್ಗೊಂಡಿದ್ದರು.