ದೇವನಹಳ್ಳಿ : ಕಳೆದ ಹನ್ನೆರಡು ದಿನಗಳ ಹಿಂದೆ ಆರಂಭಗೊಂಡ ಪಟ್ಟಣದ ಧರ್ಮರಾಯಸ್ವಾಮಿ ದೇವಾಲಯದ ಶ್ರೀ ಮೌಕ್ತಿಕಾಂಬಾ ಅಮ್ಮನವರ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆದಿದ್ದು, ಮುಕ್ತಾಯ ಕಂಡಿತು. ಕರಗದ ಜತೆ ಕತ್ತಿ ಹಿಡಿದು ಹೆಜ್ಜೆ ಹಾಕಿದ್ದ ವೀರಕುಮಾರರು ಸಂಪ್ರದಾಯದಂತೆ ಎರಡು ಗುಂಪುಗಳಾಗಿ ದೊಡ್ಡದೊಡ್ಡ ದೊಣ್ಣೆ ಹಿಡಿದು ದೇವಾಲಯದಲ್ಲಿ ವಸಂತೋತ್ಸವ ಆಚರಿಸಿದರು.
ವಸಂತೋತ್ಸವದಲ್ಲಿ ಎರಡು ಬಲಿತ ತೆಂಗಿನಕಾಯಿಗಳನ್ನು ಹಗ್ಗಕ್ಕೆ ಕಟ್ಟಿ ಒಂದು ಗುಂಪು ಅದನ್ನು ಹಗ್ಗ ಹಿಡಿದು ಮೇಲೆ ಕೆಳಗೆ ಜಗ್ಗುತ್ತಾ ಎದುರು ಗುಂಪಿನ ಮೇಲೆ ಅರಿಶಿಣ, ಕುಂಕುಮ ನೀರು ಎರಚುತ್ತಾ ಅಡ್ಡಿಪಡಿಸುತ್ತಿದ್ದರು. ಮತ್ತೊಂದು ಗುಂಪು ಅವರು ಎರಚಿದ ಬಿರುಸಿನ ಹೊಕುಳಿ ನೀರಿನಿಂದ ತಪ್ಪಿಸಿಕೊಂಡು ಜಗ್ಗುವ ಹಗ್ಗದ ಕೊನೆಯಲ್ಲಿನ ತೆಂಗಿನಕಾಯಿ ಒಡೆಯಲು ಮುಂದಾಗುತ್ತಿದ್ದರು. ಗೆದ್ದವರು ಹಗ್ಗ ಸಮೇತ ತೆಂಗಿನಕಾಯಿ ಜುಂಜು ಸಹಿತ ಎಳೆದುಕೊಂಡು ದೊಣ್ಣೆ ಹಿಡಿದು ತಮಟೆ ವಾದ್ಯದೊಂದಿಗೆ ಧರ್ಮರಾಯಸ್ವಾಮಿ ದೇವಾಲಯದ ಪ್ರದಣಿ ಮಾಡುವ ಮೂಲಕ ವಸಂತೋತ್ಸವ ತೆರೆಕಂಡಿತು.
