ಬೆಂಗಳೂರು: ರಸ್ತೆ ಅಗಲೀಕರಣ ಯೋಜನೆಯನ್ನು ಚುರುಕುಗೊಳಿಸಲು ಆಯಾ ರಸ್ತೆಗಳಿಗೆ ಸಂಬಂಧಿಸಿದ ಸ್ವತ್ತುಗಳ ಮಾಲೀಕರಿಗೆ ಟಿಡಿಆರ್ ನೀಡಿ ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಕೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಆರ್.ಆರ್.ನಗರ ವಲಯ ಅಧಿಕಾರಿಗಳಿಗೆ ಸೂಚಿಸಿದರು.
ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ನಾಗರಿಕರಿಂದ ಅಹವಾಲು ಸ್ವೀಕರಿಸುವ ವೇಳೆ ಸಾರ್ವಜನಿಕರೊಬ್ಬರು, ಕೋಡಿಪಾಳ್ಯ ಮುಖ್ಯರಸ್ತೆ ಅಗಲೀಕರಣಕ್ಕಾಗಿ ಈಗಾಗಲೇ ಟಿಡಿಆರ್ ನೀಡಲಾಗಿದೆ. ಆದರೆ, ಕೆಲವರು ಟಿಡಿಆರ್ ನೀಡಿರುವ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವುಗೊಳಿಸಲು ಮನವಿ ಮಾಡಿದರು.
ಇದಕ್ಕೆ ಮುಖ್ಯ ಆಯಕ್ತರು ಪ್ರತಿಕ್ರಿಯಿಸಿ, ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರು ಕೋಡಿಪಾಳ್ಯ ಮುಖ್ಯರಸ್ತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಒತ್ತುವರಿ ಆಗಿರುವುದು ದೃಢಪಟ್ಟಲ್ಲಿ 7 ದಿನಗಳೊಳಗೆ ತೆರವುಗೊಳಿಸಿ ವರದಿ ಸಲ್ಲಿಸಬೇಕು. ಜತೆಗೆ ರಸ್ತೆ ಅಗಲೀಕರಣ ಕಾರ್ಯವನ್ನು ಆರಂಭಿಸಿ ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನಿಡಿದರು.
49 ಪಾರ್ಕ್ಗಳ ಅಭಿವೃದ್ಧಿಗೆ ಕ್ರಮ:
ಆರ್.ಆರ್.ನಗರ ವಲಯ ವ್ಯಾಪ್ತಿಯಲ್ಲಿ 139 ಉದ್ಯಾನಗಳು ಇವೆ. ಈ ಪೈಕಿ 49 ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪೈಕಿ ಉದ್ಯಾನ ವಿಭಾಗದ ಅಧಿಕಾರಿಗಳು ಕೂಡಲೆ ಸೂಕ್ತ ಕ್ರಮ ಕೈಗೊಂಡು ಉದ್ಯಾನಗಳನ್ನು ಅಭಿವೃದ್ಧಿಪಡಿಸಿ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮುಖ್ಯ ಆಯುಕ್ತರು ಸೂಚಿಸಿದರು.
ರಸ್ತೆ ದುರಸ್ತಿಗೆ ಧನ್ಯವಾದ ಹೇಳಿದ ನಾಗರಿಕರು:
ಹೊಸಕೆರೆಹಳ್ಳಿ ಕೆರೆ ಕೋಡಿಯ 300 ಮೀ. ಉದ್ದದ ರಸ್ತೆಗೆ ಸಂಬಂಧಿಸಿ ಕಳೆದ ಬಾರಿ ನಡೆದ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ ದೂರು ನೀಡಲಾಗಿತ್ತು. ಅದರಂತೆ ರಸ್ತೆ ಮೂಲಸೌಕರ್ಯ ವಿಭಾಗದಿಂದ ಕ್ರಮ ಕೈಗೊಂಡು ರಸ್ತೆಗೆ ಜಲ್ಲಿ ಹಾಕಿ ವಾಹನಗಳ ಸಂಚಾರಕ್ಕೆ ಅನುವಾಗುವಂತೆ ದುರಸ್ತಿಪಡಿಸಲಾಗಿದೆ. ಕಾಂಕ್ರೀಟ್ ರಸ್ತೆ ನಿರ್ಮಿಸಲು ಟೆಂಡರ್ ಆಹ್ವಾನಿಸಲಾಗಿದೆ. ಇದಕ್ಕಾಗಿ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ಹೂಗುಚ್ಛ ನೀಡಿ ಧನ್ಯವಾದ ತಿಳಿಸಿದರು.