ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ಜಾತಿ ಜನಗಣತಿ ವರದಿಯನ್ನು ಸಚಿವರು, ಸ್ವಪಕ್ಷದ ಶಾಸಕರಿಗೆ ಒಪ್ಪಿಸಲು ಸಿಎಂ ಸಿದ್ದರಾಮಯ್ಯಗೆ ಸಾಧ್ಯವಾಗಿಲ್ಲ. ಇನ್ನು ಜನರಿಗೆ ಹೇಗೆ ಒಪ್ಪಿಸುತ್ತಾರೆ ? ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವ್ಯಂಗ್ಯವಾಗಿ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ದತ್ತಾಂಶಗಳ ಬಗ್ಗೆ ಹಲವು ಗೊಂದಲ, ವ್ಯತ್ಯಾಸಗಳಿವೆ ಎಂದು ಅನೇಕ ಸಮುದಾಯಗಳು ಆಕ್ಷೇಪಿಸಿವೆ. ಕೆ.ಜಯಪ್ರಕಾಶ್ ಹೆಗ್ಡೆಯವರು ಮನೆ, ಮನೆಗೆ ಹೋಗಿ ಸಮೀಕ್ಷೆ ನಡೆಸಿ ವರದಿ ಕೊಟ್ಟಿಲ್ಲ.
ಕಾಂತರಾಜು ವರದಿಯನ್ನು ಆಧಾರವಾಗಿಟ್ಟುಕೊಂಡು ವರದಿ ನೀಡಿದ್ದಾರೆ. ಕಾಂತರಾಜು ವರದಿಗೆ ಸದಸ್ಯ ಕಾರ್ಯದರ್ಶಿ ಸಹಿಯಿಲ್ಲ, ಮೂಲ ಪ್ರತಿ ನಾಪತ್ತೆಯಾಗಿದೆ ಎನ್ನಲಾಗಿದೆ. ಈ ವರದಿ ಬಗ್ಗೆ ಚರ್ಚಿಸಲು ವಿಧಾನಮಂಡಲ ವಿಶೇಷ ಅಧಿವೇಶನ ಕರೆಯಬೇಕು ಎಂದು ಸಿ.ಟಿ.ರವಿ ಆಗ್ರಹಿಸಿದರು.
ವೇಮುಲ ಕಾಯ್ದೆಗೆ ಆಕ್ಷೇಪ
ರೋಹಿತ್ ವೇಮುಲ ಹೆಸರಿನಲ್ಲಿ ಪರಿಶಿಷ್ಟ ಜಾತಿ, ಪಂಗಡಗಳು, ಒಬಿಸಿ ಹಾಗೂ ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಘನತೆ ಹಕ್ಕು ರಕ್ಷಣೆ ವಿಶೇಷ ಕಾಯ್ದೆ ಜಾರಿಗೆ ಮುಂದಾಗಿರುವುದಕ್ಕೆ ಆಕ್ಷೇಪಿಸಿದರು.
ರಾಹುಲ್ ಗಾಂಧಿ ಹೇಳಿದ್ದೆಲ್ಲ ಮಾಡುವುದು ಗುಲಾಮಗಿರಿ ಸಂಸ್ಕೃತಿಯಾಗುತ್ತದೆ. ರಾಹುಲ್ಗಾಂಧಿ ಅವರಿಗೆ ಸಿಎಂ ಸಿದ್ದರಾಮಯ್ಯ ಗುಲಾಮರಲ್ಲವೆಂದು ಭಾವಿಸಿದ್ದೇನೆ ಎಂದು ಕುಟುಕಿದರು.
ರೋಹಿತ್ ವೇಮುಲ ದಲಿತನಲ್ಲ, ಆತನ ಸಾವಿಗೆ ಜಾತಿ ವೈಷಮ್ಯ ಕಾರಣವಲ್ಲ ಎಂಬುದು ತನಿಖಾ ವರದಿಯಿಂದ ದೃಢಪಟ್ಟಿದೆ. ಇದಕ್ಕೂ ಮೊದಲು ದಲಿತ, ಪ್ರಧಾನಿ ನರೇಂದ್ರ ಮೋದಿ ದೌರ್ಜನ್ಯ ನಡೆಸಿದರು ಎಂಬಂತೆ ಬಿಂಬಿಸಿದ್ದರು.
ತಲೆ ಸರಿಯಿಲ್ಲದವರ ಮಾತನ್ನೂ ಕೇಳುತ್ತಿರುವ ಸಿಎಂಗೆ ಏನು ಹೇಳಬೇಕು ?. ಸಮಾಜಕ್ಕೆ ರೋಹಿತ್ ವೇಮುಲ ನೀಡಿದ ಕೊಡುಗೆ ಏನು ?. ವಿಶೇಷ ಕಾಯ್ದೆಗೆ ಅಭ್ಯಂತರವಿಲ್ಲ, ಬೇರೆ ವ್ಯಕ್ತಿಗಳು ಸಿಗಲಿಲ್ಲವೆ ? ಎಂದು ಸಿ.ಟಿ.ರವಿ ಪ್ರಶ್ನಿಸಿದರು.
ಚುನಾವಣಾ ಆಯೋಗದ ಬಗ್ಗೆ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿದೇಶದಲ್ಲಿ ದೇಶದ ಸಂವಿಧಾನಬದ್ಧ ಸಂಸ್ಥೆಗಳ ಬಗ್ಗೆ ಅಪಪ್ರಚಾರ ಮಾಡುವುದು ಕಾಂಗ್ರೆಸ್ಗೆ ಅಂಟಿಕೊಂಡ ಹಳೇ ಕಾಯಿಲೆಯಾಗಿದೆ ಎಂದರು.
ಅಮೇಥಿ ಕ್ಷೇತ್ರದಿಂದ ರಾಹುಲ್ ಗಾಂಧಿ ಗೆದ್ದಾಗ ಎಲ್ಲವೂ ಪಾರದರ್ಶಕವಾಗಿತ್ತು. ಕಾಂಗ್ರೆಸ್ ಪಕ್ಷ ಗೆದ್ದ ಕಡೆ ಸರಿಯ, ಸೋತ ಕಡೆ ಸರಿಯಿಲ್ಲ. ಅವರ ಮಾತುಗಳನ್ನು ಕಾಂಗ್ರೆಸ್ ಪಕ್ಷವೇ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಸಿ.ಟಿ.ರವಿ ಛೇಡಿಸಿದರು.