ಹುಬ್ಬಳ್ಳಿ : ಇಲ್ಲಿನ ಗದಗ ರಸ್ತೆಯ ರೈಲು ವಸ್ತು ಸಂಗ್ರಹಾಲಯದಲ್ಲಿ ವಿಶೇಷ ಪರಂಪರಾ ನಡಿಗೆಯೊಂದಿಗೆ ಶುಕ್ರವಾರದಂದು ವಿಶ್ವ ಪರಂಪರಾ ದಿನ ಆಚರಿಸಲಾಯಿತು.
ಅತಿಥಿಯಾಗಿದ್ದ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಮುಕುಲ್ ಸರನ್ ಮಾಥುರ್, ರೈಲು ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿದರು. ಭಾರತೀಯ ರೈಲ್ವೆಯ ಶ್ರೀಮಂತ ಪರಂಪರೆ ಮತ್ತು ಸಂರಕ್ಷಿತ ಇತಿಹಾಸವನ್ನು ಮೆಚ್ಚಿದರು. ರೈಲ್ವೆ ಪರಂಪರೆಯನ್ನು ಕಾಪಾಡುವಲ್ಲಿ ಮತ್ತು ಪ್ರದರ್ಶಿಸುವಲ್ಲಿ ಕಾರ್ಯುಗಾರದ ಸಿಬ್ಬಂದಿಯ ಸೃಜನಶೀಲತೆ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದರು.
ರೈಲ್ವೆಯು ತನ್ನದೇ ಆದ ಇತಿಹಾಸವನ್ನು ಹೊಂದಿರುವ ಏಕೈಕ ಸಂಸ್ಥೆಯಾಗಿದೆ. ಪರಂಪರೆಯ ಸ್ಮಾರಕಗಳು ಮತ್ತು ಉಪಕರಣಗಳ ಮೂಲಕ ಅದು ಪ್ರತಿನಿಧಿಸಲ್ಪಡುತ್ತದೆ. ಇವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಭವಿಷ್ಯದ ಪೀಳಿಗೆಗಾಗಿ ಈ ಪರಂಪರೆಯನ್ನು ನಾವು ಕಾಪಾಡಬೇಕು ಎಂದು ಹೇಳಿದರು.
ಪರಂಪರೆ ಸಂರಕ್ಷಣೆಯಲ್ಲಿ, ಸಾರ್ವಜನಿಕ ಆಸಕ್ತಿಯನ್ನು ಉತ್ತೇಜಿಸುವ ಕ್ರಮವಾಗಿ ವಸ್ತು ಸಂಗ್ರಹಾಲಯಕ್ಕೆ ಇಡೀ ದಿನ ಉಚಿತ ಪ್ರವೇಶ ನೀಡಲಾಗಿತ್ತು.
ನೈಋತ್ಯ ರೈಲ್ವೆ ವಲಯದ ಅಪರ ಮಹಾಪ್ರಬಂಧಕ ಕೆ.ಎಸ್. ಜೈನ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.