ಸೋಮವಾರಪೇಟೆ: ಕಕ್ಕೆಹೊಳೆಯ ಹಳೆಯ ಸೇತುವೆ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣ ವೇದಿಕೆ ವತಿಯಿಂದ ಸೋಮವಾರ ಸೇತುವೆ ಬಳಿಯಲ್ಲೇ ಪ್ರತಿಭಟನೆ ನಡೆಸಲಾಯಿತು.
ಕುಸಿಯುವ ಹಂತ ತಲುಪಿದ್ದ ಸಂದರ್ಭ ಸಂಚಾರ ಬಂದ್ ಮಾಡಿ 5 ತಿಂಗಳು ಕಳೆದರೂ ಇದುವರೆಗೂ ಸೇತುವೆ ಕಾಮಗಾರಿ ಪ್ರಾರಂಭಿಸಿಲ್ಲ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸುಳ್ಳು ಹೇಳಿಕೊಂಡೇ ತಿರುಗುತ್ತಿದ್ದಾರೆ. 5 ದಶಕಗಳ ಹಳೆಯದಾದ ಸೇತುವೆ ಇದು. ಅತೀ ಹೆಚ್ಚು ವಿದ್ಯಾರ್ಥಿಗಳು ಬೆಳಗ್ಗೆ ಸಂಜೆ ಇದೇ ಸೇತುವೆ ಮೇಲೆ ನಡೆದುಕೊಂಡು ಹೋಗುತ್ತಾರೆ. ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ಇದುವರೆಗೆ ಈ ಸೇತುವೆ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಗೆ ಸಾಧ್ಯವಾಗಿಲ್ಲ ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್.ದೀಪಕ್ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 5 ತಿಂಗಳಿನಿಂದ ಬದಲಿ ಮಾರ್ಗ ಕಲ್ಪಿಸಲಾಗಿದೆ. ಈ ಮಾರ್ಗ ಸೂಕ್ತವಾಗಿಲ್ಲ. ಹೈವೆಯಲ್ಲಿ ಅತೀ ವೇಗದಲ್ಲಿ ಭಾರಿ ವಾಹನಗಳು ಸಂಚರಿಸುತ್ತಿರುತ್ತವೆ. ಬೆಳಗ್ಗೆ ಸಂಜೆ ನೂರಾರು ವಿದ್ಯಾರ್ಥಿಗಳು ರಸ್ತೆ ದಾಟಬೇಕಿದೆ. ಈಗಾಗಲೇ ಇಬ್ಬರು ವಿದ್ಯಾರ್ಥಿಗಳಿಗೆ ವಾಹನ ಡಿಕ್ಕಿ ಹೊಡೆದಿವೆ. ಶಾಸಕ ಡಾ.ಮಂತರ್ಗೌಡ ಅವರ ಮನೆಯೂ ಹತ್ತಿರದಲ್ಲಿದೆ. ಕೂಡಲೆ ಶಾಸಕರು ಸರ್ಕಾರದಿಂದ ಅನುದಾನ ತರಬೇಕು ಎಂದು ಒತ್ತಾಯಿಸಿದರು.
ಮುಂದಿನ ಒಂದು ತಿಂಗಳ ಒಳಗೆ ಸೇತುವೆ ಕಾಮಗಾರಿ ಪ್ರಾರಂಭಿಸದಿದ್ದರೆ ಸೋಮವಾರಪೇಟೆ, ಮಡಿಕೇರಿ ರಸ್ತೆ ತಡೆದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನಗರ ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಚಂದ್ರು, ರವಿ, ಬೇಡು, ರೂಪಾ, ಸುನಂದಾ, ಸುಮತಿ ಇದ್ದರು. ಎಇಇ ವೆಂಕಟೇಶ್ ನಾಯಕ್, ತಹಸೀಲ್ದಾರ್ ನರಗುಂದ ಅವರಿಗೆ ಸಲ್ಲಿಸಲಾಯಿತು.