ಕಲಬುರಗಿ: ಮುಖ್ಯಮಂತ್ರಿಗೆ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಿಸುವ ಇಚ್ಛಾಶಕ್ತಿ ಇಲ್ಲ. 220 ದಿನಗಳಲ್ಲಿ ಅಧಿಕಾರ ತ್ಯಾಗ ಮಾಡುವ ವೇಳೆ ಜಾತಿ ಗಣತಿ ವರದಿಯ ಗೊಂದಲ ಸೃಷ್ಟಿಸಿದ್ದಾರೆ. ಗುರುವಾರ ಜಾತಿ ಗಣತಿ ವರದಿ ಚರ್ಚೆಗೆ ವಿಶೇಷ ಸಂಪುಟ ಸಭೆ ಯಾಕೆ ಮಾಡಿದರು? ಹತ್ತಾರು ಸಂಪುಟ ಸಭೆ ನಡೆದರೂ ಏನು ಆಗುವುದಿಲ್ಲ. ಮಾಡುವ ಇಚ್ಛಾಶಕ್ತಿ ಸಿಎಂಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂಗೆ ಓಬಿಸಿ, ದಲಿತ ಸೇರಿ ಯಾರಿಗೂ ನ್ಯಾಯ ಕೊಡುವುದು ಇಷ್ಟವಿಲ್ಲ. 10 ವರ್ಷಕ್ಕೊಮ್ಮೆ ಜಾತಿಗಣತಿ ಆಗಬೇಕು. ಬೇರೆ ಬೇರೆ ಸಮುದಾಯದವರಿಗೆ ಅನ್ಯಾಯ ಆಗಿದೆ. ಹಿಂದೆ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ವೀರಶೈವ ಲಿಂಗಾಯತರ ಮಧ್ಯೆ ಬೆಂಕಿ ಹಚ್ಚಿದ್ದರು. ಇದೀಗ ಪುನ@ ಅಧಿಕಾರದಿಂದ ಕೆಳಗಿಳಿಯುವ ವೇಳೆ ಸಮುದಾಯಗಳ ಮಧ್ಯೆ ಜಗಳ ಹಚ್ಚಲು ಜಾತಿ ಗಣತಿ ವರದಿ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಎಲ್ಲರ ಮುಖ್ಯಮಂತ್ರಿ ಇದ್ದಾರೋ ಅಥವಾ ಮುಸ್ಲಿಮರ ಮುಖ್ಯಮಂತ್ರಿ ಇದ್ದಾರೋ ಎಂದು ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ. ಗ್ಯಾರಂಟಿ ನೀಡಿದ್ದೇವೆ ಎಲ್ಲರೂ ಸುಖವಾಗಿ ಇದ್ದಾರೆ ಎಂಬ ಕುರುಡು ಭ್ರಮೆಯಲ್ಲಿ ಸಿಎಂ ಇದ್ದಾರೆ. ಆದರೆ, ಜನತೆ ಬೆಲೆ ಏರಿಕೆಯಿಂದ ತತ್ತರಿಸಿ ಹೋಗುತ್ತಿದ್ದಾರೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಅದರ ಎರಡರಷ್ಟು ಕಿತ್ತುಕೊಳ್ಳುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಸರ್ಕಾರ ರೈತರ ಸಮಸ್ಯೆ ಆಲಿಸುತ್ತಿಲ್ಲ, ಹಿಂದೂಗಳ ಅಪಮಾನ ಮಾಡುವ ಮೂಲಕ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದೆ ಎಂದರು.
ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್, ಎಂಎಲ್ಸಿ ರವಿಕುಮಾರ ಇತರರಿದ್ದರು.
