ನವದೆಹಲಿ: ಆ್ಯಸಿಡ್ ದಾಳಿಗೊಳಗಾದವರಿಗೆ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಚಪಾಕ್ ಚಿತ್ರ ತಂಡವು ಕೌಶಲಾಭಿವೃದ್ಧಿ ಸಚಿವಾಲಯಕ್ಕೆ ನೀಡಿದ್ದ ಮನವಿಯನ್ನು ಕೈ ಬಿಡಲಾಗಿದೆ.
ಸಚಿವಾಲಯದ ಪ್ರಕಾರ, ಭಾರತದ ಕೌಶಲ ಅಭಿವೃದ್ಧಿಗೆ ಮಾಧ್ಯಮ ಸಂಸ್ಥೆ ಮತ್ತು ಸಂಘಟನೆಗಳ ಸಲಹೆಗಳನ್ನು ಪಡೆಯಲಾಗುತ್ತದೆ. ಆದರೆ ಚಪಾಕ್ ಚಿತ್ರ ತಂಡವು ಸಿನಿಮಾದಲ್ಲಿನ ವಿಷಯವನ್ನು ಪ್ರಚಾರ ಮಾಡಲು ಕೋರಿತ್ತು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ರತಂಡವು ಆ್ಯಸಿಡ್ ದಾಳಿಗೆ ಒಳಗಾದವರು ಮತ್ತು ಕೆಲ ಅಂಗವಿಕಲರನ್ನು ಭೇಟಿ ಮಾಡಿ, ಅವರಲ್ಲಿ ಸ್ಥೈರ್ಯ ತುಂಬುವ ಕೆಲಸ ಮಾಡಿತ್ತು. ಅವರೆಲ್ಲ ಕೌಶಾಲಾಭಿವೃದ್ಧಿ ಸಚಿವಾಲಯದ ಫಲಾನುಭವಿಗಳು. ಚಿತ್ರ ತಂಡದೊಂದಿಗೆ ಈ ಬಗ್ಗೆ ಯಾವ ಕಮಿಟ್ಮೆಂಟ್ ಇಲ್ಲ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಸಂಜೆ ನಟಿ ದೀಪಿಕಾ ಪಡುಕೋಣೆ ಜೆಎನ್ಯು ವಿವಿಗೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳೊಂದಿಗೆ 15 ನಿಮಷಗಳ ಕಾಲ ಕಳೆದಿದ್ದರು. ಇದಕ್ಕೆ ಪರ ಮತ್ತು ವಿರೋಧದ ಮಾತುಗಳು ಕೇಳಿಬಂದಿದ್ದವು.
ಚಪಾಕ್ ಚಲನಚಿತ್ರವು ಆ್ಯಸಿಡ್ ದಾಳಿಗೊಳಗಾಗಿರುವ ಲಕ್ಷ್ಮೀ ಅಗರ್ವಾಲ್ ಅವರ ಜೀವನಾಧರಿತ ಚಿತ್ರ. (ಏಜೆನ್ಸೀಸ್)