ಮೊಳಕಾಲ್ಮೂರು: ವಾಲ್ಮೀಕಿ ಸಮುದಾಯದ ಹೆಸರಿನಲ್ಲಿ ನಡೆಯುತ್ತಿರುವ ನಕಲಿ ಪ್ರಮಾಣ ಪತ್ರದ ದಂಧೆಗೆ ಕಡಿವಾಣ ಹಾಕಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಆಗ್ರಹಿಸಿದರು.
ಹರಿಹರದ ರಾಜನಹಳ್ಳಿ ಗುರುಪೀಠದಲ್ಲಿ ಫೆ.8, 9ರಂದು ನಡೆಯುವ ವಾಲ್ಮೀಕಿ ಜಾತ್ರೆ ಹಿನ್ನೆಲೆಯಲ್ಲಿ ವಾಲ್ಮೀಕಿ ಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯದ ನಾಲ್ಕನೇ ದೊಡ್ಡ ಸಮುದಾಯವಾಗಿರುವ ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಮನ ಹರಿಸುತ್ತಿಲ್ಲ ಎಂದು ಬೇಸರಿಸದಿರು.
ಎಸ್ಸಿ, ಎಸ್ಟಿ ಸಮುದಾಯದ ಪ್ರಗತಿಗಾಗಿ ಕಳೆದ ವರ್ಷದ ಬಜೆಟ್ನಲ್ಲಿ ಮೀಸಲಿಟ್ಟ 30 ಸಾವಿರ ಕೋಟಿ ರೂ. ಹಣದಲ್ಲಿ ಕೇವಲ 11 ಸಾವಿರ ಕೋಟಿ ಬಳಕೆಯಾಗಿದೆ. ಉಳಿದ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.
ತಾಲೂಕಿನಲ್ಲಿ ವಾಲ್ಮೀಕಿ ಸಮುದಾಯ ಭವನದ ಅಭಿವೃದ್ಧಿಗೆ 2.50 ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ನಾಯಕ ಸಮಾಜದ ಅಧ್ಯಕ್ಷ ಕೆ.ಜಗಲೂರಯ್ಯ ಹಾಗೂ ಪದಾಧಿಕಾರಿಗಳು ಶ್ರೀಗಳಿಗೆ ಮನವಿ ಸಲ್ಲಿಸಿದರು.
ಸಮಾಜದ ಮುಖಂಡರಾದ ವೀರೇಂದ್ರ ಸಿಂಹ, ಕೆ.ರಾಜಣ್ಣ, ಎಸ್.ತಿಪ್ಪೇಸ್ವಾಮಿ, ಇಒ.ಪ್ರಕಾಶ್, ಗುರು ರಾಜಣ್ಣ, ವೈ.ಡಿ.ಬಸವರಾಜ್, ವಿ.ಮಾರನಾಯಕ, ಎನ್.ಬಿ.ಗೋವಿಂದಪ್ಪ, ಬಿ.ಸತ್ಯನಾರಾಯಣ, ಎಸ್.ಈ.ದೇವಯ್ಯ ರಾಮದಾಸ್, ಪರಮೇಶ್ವರಪ್ಪ, ಪಾಲಯ್ಯ, ಸುರೇಶ್, ಸಂಜೀವಮೂರ್ತಿ, ಪಾಪೇಶ್, ಉಮೇಶ್ ಇದ್ದರು.