ಸಿಂಧನೂರು: ಆಲಿಕಲ್ಲು ಮಳೆಯಿಂದ ನಷ್ಟಕ್ಕೀಡಾದ ರೈತರಿಗೆ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿ ಏ.15 ರಂದು ರಾಗಲಪರ್ವಿ ಕ್ರಾಸ್ ಬಳಿ ಸಂಚಾರ ತಡೆ ನಡೆಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನಪಾಷಾ ದಿದ್ದಗಿ ತಿಳಿಸಿದರು.


ನಗರದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನವೆಂಬರ್ನಲ್ಲಿ ಸುರಿದ ಅಕಾಲಿಕ ಮಳೆಗೆ ರೈತರು ಬೆಳೆ ನಷ್ಟ ಹೊಂದಿದ್ದರು. ಆದರೆ, ಸರ್ಕಾರ ಸಮರ್ಪಕ ಪರಿಹಾರ ನೀಡಲಿಲ್ಲ. ನಷ್ಟಕ್ಕೀಡಾದ ರೈತರಿಗೆ ಕಡಿಮೆ ಪರಿಹಾರ, ಇನ್ನೂ ಕೆಲವರಿಗೆ ನೀಡಿಲ್ಲ. ಈಗ ಮತ್ತೆ ತಾಲೂಕಿನಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಆಲಿಕಲ್ಲು ಮಳೆಗೆ ಹಾಳಾಗಿ ರೈತರು ನಷ್ಟ ಅನುಭವಿಸಿದ್ದಾರೆ.
ಕೂಡಲೇ ಸರ್ವೇ ನಡೆಸಿ, ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಬೇಕು. ಜೋಳದ ಖರೀದಿ ಕೇಂದ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಪರಿಹರಿಸಬೇಕೆಂದು ಆಗ್ರಹಿಸಿದರು. ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಹಂಚಿನಾಳ, ತಾಲೂಕು ಗೌರವಾಧ್ಯಕ್ಷ ಅಣ್ಣಪ್ಪ ಜಾಲಿಹಾಳ, ದುರುಗಪ್ಪ ಇದ್ದರು.