ಸಿಂದಗಿ : ತಾಪಂ ಆಡಳಿತ ಮಂಡಳಿ ವರ್ತನೆ ಹಾಗೂ ಆಡಳಿತಾಧಿಕಾರಿಗಳ ದುವರ್ತನೆ ಮತ್ತು ವರ್ಷವಿಡಿ ನಡೆದ ಸಭೆಗಳಿಗೆ ವಿವಿಧ ಇಲಾಖೆ ಅಧಿಕಾರಿಗಳ ಗೈರು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸರ್ವ ಸದಸ್ಯರು ತಾಪಂನ 12ನೇ ಸಾಮಾನ್ಯ ಸಭೆ ಬಹಿಷ್ಕರಿಸಿ ಹೊರ ನಡೆದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಶ್ರೀಶೈಲ ಕಬ್ಬಿನ, ಸಭೆಗೆ ಗೈರು ಹಾಗೂ ಹಾಜರಿರುವ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಬಗ್ಗೆ ಪ್ರಸ್ತಾಪಿಸಿದಾಗ, ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ, ಕೈಗಾರಿಕೆ ಇಲಾಖೆ, ಚಿಕ್ಕ ನೀರಾವರಿ, ಆಹಾರ, ಆರೋಗ್ಯ ಮತ್ತು ಲೋಕೋಪಯೋಗಿ ಇಲಾಖೆ ಸೇರಿ ಕೆಲ ಅಧಿಕಾರಿಗಳು ವರ್ಷದಲ್ಲಿ ನಡೆದ ಸಭೆಗಳಿಗೆ ಗೌರವ ನೀಡದೆ ನೆಪಗಳಿಂದಲೇ ಗೈರಾಗುತ್ತಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಯಾವುದಾದರೂ ಮಾಹಿತಿ ಪಡೆಯಬೇಕೆಂದರೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆರೋಪಿಸಿ, ತಾಪಂ ಇಒ ಅವರನ್ನು ಕೆಲಸ ಮಾಡಲು ಇಚ್ಛೆಯಿಲ್ಲದಿದ್ದರೆ, ಕೆಲಸ ಬಿಟ್ಟು ಹೋಗಿ ಎಂದು ತರಾಟೆಗೆ ತೆಗೆದುಕೊಂಡರು.
ಇಡೀ ಆಡಳಿತ ವ್ಯವಸ್ಥೆಗೆ ಮುಖ್ಯಸ್ಥರಾಗಿರುವ ತಾಪಂ ಅಧ್ಯಕ್ಷೆ ತಮ್ಮ ಕೆಲಸಗಳ ಹೊರತಾಗಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಇತರ ಸದಸ್ಯರನ್ನು ಅಗೌರವವಾಗಿ ಕಾಣುತ್ತಿದ್ದೀರಿ. ಇದರಿಂದಲೇ ಆಡಳಿತ ಯಂತ್ರ ಸಂಪೂರ್ಣ ಕುಸಿತ ಕಂಡು ನಮ್ಮ ಕ್ಷೇತ್ರದ ಜನರಿಂದ ಬಾಯಿಗೆ ಬಂದಂತೆ ಉಗುಳಿಸಿಕೊಳ್ಳುತ್ತಿದ್ದೇವೆ ಎಂದು ದೂರಿದರು.
ನಂತರ ಸದಸ್ಯ ಎಂ.ಎನ್. ಕಿರಣರಾಜ ಸಂಬಂಧಿಸಿದ ಅಧಿಕಾರಿಗಳಿಗೆ ಶೋಕಾಸ್ ನೋಟೀಸು ಜಾರಿ ಮಾಡಿ, ಮುಂದಿನ ಸಭೆಗೆ ಹಳೆಯ ನಿರ್ಣಯಗಳ ಬಗ್ಗೆ ಕೈಗೊಂಡ ಕ್ರಮಗಳೇನು ಎನ್ನುವ ಕೆಲಸಗಳ ಅನುಷ್ಠಾನದ ವರದಿಯೊಂದಿಗೆ ಇಲಾಖೆಯ ಮುಖ್ಯ ಅಧಿಕಾರಿಗಳು ಖುದ್ದು ಹಾಜರಿರುವಂತೆ ಸೂಚನೆ ನೀಡಿ, ಇಲ್ಲದಿದ್ದರೆ ಕಚೇರಿ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕಲಕೇರಿ ತಾಪಂ ಸದಸ್ಯ ಲಕ್ಕಪ್ಪ ಬಡಿಗೇರ, ವಸತಿ ನಿಲಯಗಳ ಸುಧಾರಣೆಗೆ 36 ಲಕ್ಷ ವ್ಯಯಿಸಿರುವುದಾಗಿ ಹೇಳಲಾಗುತ್ತಿದೆ. ಯಾವುದಕ್ಕೆ ಏನು ಖರ್ಚು ಮಾಡಿದ್ದೀರಿ ಎಂದು ಪ್ರಶ್ನಿಸಿ, ಸುಧಾರಣೆ ಮಾಡಿರುವುದಾದರು ಏನು? ನೋಡಿ ಹೇಗೆಲ್ಲ ಕಳಪೆ ಸುಧಾರಣೆ ಮಾಡಿದ್ದೀರಿ ನೋಡಿ ಎಂದು ಅಧಿಕಾರಿಗಳಿಗೆ ಹಾಗೂ ಮಾಧ್ಯಮದವರಿಗೆ ೆಟೋ ಪ್ರದರ್ಶಿಸಿದರು.
ಅಧಿಕಾರಿಗಳ ಗೈರುವಿರುವ ಕಾರಣ ಸಭೆಯನ್ನು ಜ.28ಕ್ಕೆ ಮುಂದೂಡಿ, ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳನ್ನು ಹೊರ ನಡೆಯಲು ಕೆಲವು ಸದಸ್ಯರು ಸೂಚಿಸಿದರಲ್ಲದೆ, ಅಧ್ಯಕ್ಷೆ, ಉಪಾಧ್ಯಕ್ಷೆ ಮತ್ತು ತಾಪಂ ಕಾರ್ಯನಿರ್ವಾಹಕಾಧಿಕಾರಿ ಮತ್ತು ಸದಸ್ಯರು ತಾಪಂ ಕಚೇರಿಗೆ ಸಂಬಂಧಿಸಿದ ಸಂಗತಿಗಳ ಬಗ್ಗೆ ಚರ್ಚೆ ನಡೆಸಿದರು. ತಾಪಂ ಅಧ್ಯಕ್ಷೆ ಪ್ರಭಾವತಿ ಶಿರಸಗಿ, ಉಪಾಧ್ಯಕ್ಷೆ ಲಲಿತಾಬಾಯಿ ದೊಡಮನಿ, ಇಒ ಸುನೀಲ್ ಮದ್ದೀನ್ ಹಾಗೂ ಸದಸ್ಯರು ಇದ್ದರು.