ಮುಂಬೈ: ಕಳೆದ 200ಕ್ಕೂ ಹೆಚ್ಚು ವರ್ಷಗಳ ಅವಧಿಯಲ್ಲಿ ಮುಂಬೈ ಸಿದ್ಧಿವಿನಾಯಕ ದೇವರಿಗೆ ಇದೇ ಮೊದಲ ಬಾರಿಗೆ 35 ಕಿಲೋ ಚಿನ್ನ ಕಾಣಿಕೆ ರೂಪದಲ್ಲಿ ಒಂದೇ ಬಾರಿಗೆ ಸಿಕ್ಕಿದೆ. ಈ ಕಾಣಿಕೆಯ ಮೌಲ್ಯ ಬರೋಬ್ಬರಿ 14 ಕೋಟಿ ರೂಪಾಯಿ.
ಈ ಚಿನ್ನವನ್ನು ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನದ ಗರ್ಭಗುಡಿ, ಬಾಗಿಲು ಮತ್ತು ಛಾವಣಿಗೆ ಹೊದಿಕೆಯಾಗಿ ಬಳಸಲು ನಿರ್ಧರಿಸಿಕೊಂಡಿದೆ. ಪ್ರಾಣ ಪ್ರತಿಷ್ಠೆಗಾಗಿ ದೇವಸ್ಥಾನವನ್ನು ಜನವರಿ 15-19ರ ತನಕ ಮುಚ್ಚಲಾಗಿತ್ತು. ಸಿಂಧೂರ್ ಲಾಪನ್ ಕಾರ್ಯಕ್ರಮ ಈ ಅವಧಿಯಲ್ಲಿ ನಡೆದಿತ್ತು. ಇದೇ ಸಂದರ್ಭದಲ್ಲಿ ದೆಹಲಿಯ ಭಕ್ತರೊಬ್ಬರು ಈ ಚಿನ್ನವನ್ನು ಕಾಣಿಕೆ ರೂಪದಲ್ಲಿ ಸಲ್ಲಿಸಿದ್ದಾರೆ ಎಂದು ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.
ಸಿದ್ಧಿವಿನಾಯಕ ಟೆಂಪಲ್ ಟ್ರಸ್ಟ್ ಅಧ್ಯಕ್ಷ ಆದೇಶ್ ಬಂಡೇಕರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ದೇಣಿಗೆಯಾಗಿ ನೀಡಿದ ಚಿನ್ನವನ್ನು ಗರ್ಭಗುಡಿ, ಬಾಗಿಲು ಮತ್ತು ಛಾವಣಿಗೆ ಹೊದಿಕೆಯಂತೆ ಬಳಸಲು ತೀರ್ಮಾನಿಸಲಾಗಿದೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು. ಆರು ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ. ಕಾಣಿಕೆ ನೀಡಿದ ಭಕ್ತರ ವಿವರವನ್ನು ಅವರು ಬಹಿರಂಗಪಡಿಸಿಲ್ಲ.
ದೇವಸ್ಥಾನಕ್ಕೆ 2017ರಲ್ಲಿ 320 ಕೋಟಿ ರೂಪಾಯಿ ಕಾಣಿಕೆ ಲಭಿಸಿತ್ತು. 2019ರಲ್ಲಿ 410 ಕೋಟಿ ರೂಪಾಯಿ ಕಾಣಿಕೆ ಬಂದಿದೆ. ಬಹುಪಾಲು ಕಾಣಿಕೆಯ ಹಣವನ್ನು ಅಗತ್ಯ ಇರುವವರಿಗೆ ನೆರವಾಗಲು ಬಳಸಲಾಗುತ್ತಿದೆ. ಸಿದ್ಧಿವಿನಾಯಕ ದೇವಸ್ಥಾನವನ್ನು 1801ರ ನವೆಂಬರ್ 19ರಂದು ನಿರ್ಮಿಸಲಾಗಿದ್ದು, ಇದುವರೆಗಿನ ಕಾಣಿಕೆಯಲ್ಲಿ ಇಷ್ಟು ಬೃಹತ್ ಮೊತ್ತದ್ದು ಇದೇ ಮೊದಲು ಎಂದು ಆಡಳಿತ ಮಂಡಳಿ ತಿಳಿಸಿದೆ. (ಏಜೆನ್ಸೀಸ್)
Maharashtra: A devotee from Delhi has donated gold plating weighing around 35 kg, worth around Rs 14 crores to Mumbai's Shri Siddhivinayak Temple. pic.twitter.com/2eavuvJjmk
— ANI (@ANI) January 21, 2020