ಶಿವಮೊಗ್ಗ: ಕಾಂತರಾಜ ಆಯೋಗದ ವರದಿ ಜಾರಿಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬದ್ಧತೆ ಪ್ರದರ್ಶಿಸಬೇಕು. ಇಲ್ಲವಾದರೆ ರಾಜೀನಾಮೆ ಕೊಡಬೇಕು ಎಂದು ಹಿಂದುಳಿದ ಜನಜಾಗೃತಿ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್ ಆಗ್ರಹಿಸಿದರು.

ಸುಪ್ರೀಂಕೋರ್ಟ್ ಆದೇಶದಂತೆ ಸರ್ಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚಿಸಿತ್ತು. ಈಗಾಗಲೇ ಸರ್ಕಾರಕ್ಕೆ ಆಯೋಗ ವರದಿ ಸಲ್ಲಿಸಿದೆ. ವರದಿ ಜಾರಿಗೊಳಿಸುವ ಬಗ್ಗೆ ಸಿಎಂ ಪದೇ ಪದೆ ಮಾತನಾಡುತ್ತಿದ್ದಾರೆ. ಕೆಲ ಜಾತಿಗಳ ನಾಯಕರು ತಮ್ಮ ಅಸಿತ್ವಕ್ಕಾಗಿ ವರದಿ ಬಿಡುಗಡೆಗೆ ವಿರೋಧಿಸುತ್ತಿದ್ದು, ಕೊಟ್ಟ ಮಾತಿನಂತೆ ವರದಿ ಜಾರಿ ಮಾಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಶಾಸನ ಸಭೆಯಲ್ಲಿರುವ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಶಾಸಕರು ಮತ್ತು ಮಂತ್ರಿಗಳು ವರದಿ ಜಾರಿ ಬಗ್ಗೆ ಚಕಾರ ಎತ್ತುತ್ತಿಲ್ಲ. ಅವರಿಗೆ ಹಿಂದುಳಿದ ವರ್ಗಗಳ ಮತಗಳು ಬೇಡವೇ? ಈ ವರದಿ ಜಾರಿ ಮಾಡಲು ಭಯ ಏಕೆ? ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳುವುದನ್ನು ಬಿಟ್ಟು ವರದಿ ಜಾರಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಕೂಡ ಜಾತಿ, ಜನಗಣತಿಯನ್ನು ಒಪ್ಪಿಕೊಂಡಿದ್ದಾರೆ. ಅದನ್ನು ಎಐಸಿಸಿ ನಾಯಕ ರಾಹುಲ್ಗಾಂಧಿ ಮತ್ತು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸ್ವಾಗತಿಸಿದ್ದಾರೆ. ಆದರೆ ರಾಜ್ಯದಲ್ಲಿ ಕಾಂತರಾಜ ವರದಿ ಜಾರಿಗೆ ಎರಡು ಪಕ್ಷದವರು ಸೋಗಲಾಡಿತನ ಪ್ರದಶಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಮುಖರಾದ ಪ್ರೊ. ರಾಚಪ್ಪ, ನಟರಾಜ್, ಗೋಪಾಲಕೃಷ್ಣ, ಎಸ್.ವಿ.ರಾಜಮ್ಮ, ಪಾಂಡುರಂಗಪ್ಪ, ವರಲಕ್ಷ್ಮೀ, ಪರಮೇಶ್ವರಪ್ಪ, ಎ.ಕೆ.ಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.