ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಭಿಮತ | ಉಡುಪಿಯಲ್ಲಿ ಜಯಂತಿ ಆಚರಣೆ
ಉಡುಪಿ: ಆಧ್ಯಾತ್ಮಿಕ ಚಿಂತಕರಾದ ಶಂಕರಾಚಾರ್ಯರ ಅದ್ವೈತ ತತ್ವ ಮತ್ತು ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಆಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಅನೇಕ ಮಠಗಳ ಸ್ಥಾಪನೆ
ದೇಶಾದ್ಯಂತ ಅದ್ವೈತ ಸಿದ್ಧಾಂತ ಪ್ರಚಾರ ಮಾಡುವ ಸಂದರ್ಭದಲ್ಲಿ ಅವರು ಅನೇಕ ಮಠಗಳನ್ನು ಸ್ಥಾಪಿಸಿದ್ದಾರೆ. ಅವುಗಳಲ್ಲಿ ಶೃಂಗೇರಿಯ ಶಾರದಾ ಮಠ, ಓರಿಸ್ಸಾದ ಪುರಿಯ ಗೋವರ್ಧನ ಮಠ, ಗುಜರಾತ್ನ ಕಾಳಿಕಾ ಮಠ ಹಾಗೂ ಉತ್ತರಾಖಂಡ್ನ ಜ್ಯೋತಿರ್ ಮಠ ಪ್ರಮುಖವಾದುದು. ಅನೇಕ ಕೃತಿಗಳನ್ನೂ ಅವರು ರಚಿಸಿದ್ದಾರೆ. ಪೂಜ್ಯರ ಆಲೋಚನೆಗಳು ಹಾಗೂ ಚಿಂತನೆಗಳನ್ನು ಜೀವನದಲ್ಲಿ ನಾವುಗಳು ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಅರ್ಪಿಸೋಣ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್., ಕಸಾಪ ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ, ಬ್ರಹ್ಮಾವರ ಪಪೂ ಕಾಲೇಜಿನ ಉಪನ್ಯಾಸಕಿ ಸವಿತಾ ಎಮಾರ್ಳು, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ವಿಶ್ವನಾಥ, ಮಹೇಶ್, ಜಿಲ್ಲಾಡಳಿತದ ಸಿಬ್ಬಂದಿ ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿದರು. ಕನ್ನಡ ಉಪನ್ಯಾಸಕ ರಾಮಾಂಜಿ ವಂದಿಸಿದರು.
ಅಹಂ ಬ್ರಹ್ಮಾಸ್ಮಿ ತತ್ವ ಸಾರಿದ ಸಂತ
ಶಂಕರಾಚಾರ್ಯರ ಕುರಿತು ಉಪನ್ಯಾಸ ನೀಡಿದ ಪತ್ರಕರ್ತ ಕಿರಣ್ ಮಂಜನಬೈಲು ಮಾತನಾಡಿ, ಕೇರಳದ ಕಾಲಡಿಯಲ್ಲಿ ಜನಿಸಿದ ಶಂಕರರು ಅನೇಕ ಪವಾಡ ಮಾಡಿರುವುದು ಚರಿತ್ರೆ ಹಾಗೂ ಪುರಾಣಗಳಲ್ಲಿ ಉಲ್ಲೇಖವಾಗಿವೆ. ವೇದ, ಉಪನಿಷತ್ ಹಾಗೂ ಪುರಾಣಗಳು ಅವರಲ್ಲಿ ನಡೆದಾಡುವ ಗ್ರಂಥಾಲಯದ ರೂಪದಲ್ಲಿತ್ತು ಎಂದು ತತ್ವಜ್ಞಾನಿಗಳು ನಂಬಿದ್ದರು. ಸಮ ಸಮಾಜದ ಆಶಯ ವ್ಯಕ್ತಪಡಿಸಿದ ಮೊಟ್ಟಮೊದಲಿಗರಾದ ಅವರು, ಪ್ರಾಣಿಬಲಿ ಖಂಡಿಸಿದ್ದರು. ಅಹಂ ಬ್ರಹ್ಮಾಸ್ಮಿ ತತ್ವವನ್ನು ಸಾರಿ ಜನಸಾಮಾನ್ಯರಿಗೆ ಭಕ್ತಿ, ಜ್ಞಾನ ಮತ್ತು ಕರ್ಮ ಸಿದ್ಧಾಂತ ಬೋಧಿಸಿದ ಮಹಾನ್ ಸಂತರಾಗಿದ್ದರು ಎಂದರು.
ತತ್ವಜ್ಞಾನಿಗಳಲ್ಲಿ ಶಂಕರಾಚಾರ್ಯರು ಮೇರು ವ್ಯಕ್ತಿತ್ವದವರು. ಅವರ ಸಿದ್ಧಾಂತಗಳು ಮಾನವನ ಅಭ್ಯುಧ್ಯಯಕ್ಕೆ ದಾರಿದೀಪವಾಗಿದೆ. ಶಂಕರರ ತತ್ವ, ಆದರ್ಶಗಳು ಜೀವನವನ್ನು ಸುಗಮಗೊಳಿಸುವುದಲ್ಲದೆ, ಪರಿಪೂರ್ಣರನ್ನಾಗಿಸಲು ಸಹಕಾರಿಯಾಗಿವೆ.
ನೀಲಾವರ ಸುರೇಂದ್ರ ಅಡಿಗ. ಕಸಾಪ ಜಿಲ್ಲಾಧ್ಯಕ್ಷ, ಉಡುಪಿ