ಹೊಸಪೇಟೆ: ಡಾ. ರಾಜಕುಮಾರ್ ಅವರ ಕುಟುಂಬ ಯಾವತ್ತೂ ಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಹಲವಾರು ಜನಪರ ಕಾರ್ಯಕ್ರಮಗಳಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಈಗ ಇಂಗಳಗಿ ಗ್ರಾಮದಲ್ಲಿರೋ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಪೀಠಕ್ಕೆ ಸಹಾಯಹಸ್ತ ಚಾಚುವುದಕ್ಕೆ ಶಿವರಾಜಕುಮಾರ್ ಮುಂದಾಗಿದ್ದಾರೆ.
ಇದನ್ನೂ ಓದಿ:
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿರೋ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಪೀಠದಲ್ಲಿ ಬಡಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಪ್ರಸಾದ ವ್ಯವಸ್ಥೆ ನೀಡಲಾಗುತ್ತಿದೆ. ಇಲ್ಲಿ 127 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ 11 ವರ್ಷಗಳಿಂದ ನಡೆಯುತ್ತಿರುವ ಈ ಶಾಲೆಗೆ ಶಿವರಾಜಕುಮಾರ್ ದತ್ತು ಪಡೆಯುವ ಅಥವಾ ಸಹಾಯಹಸ್ತ ಚಾಚುವ ಬಗ್ಗೆ ಗಂಭೀರ ಯೋಚನೆ ನಡೆಸಿದ್ದಾರೆ.
ಈ ಶಾಲೆಗೆ ಸಹಾಯಹಸ್ತ ಚಾಚಬೇಕು ಎಂದು ಅಭಿಮಾನಿಗಳ ಬೇಡಿಕೆಯ ಮೇರೆಗೆ ಶಿವರಾಜಕುಮಾರ್ ದಂಪತಿಯು ಈ ಶಾಲೆಗೆ ಭೇಟಿ ನೀಡಿ ದಿಗಂಬರ ಭಾರತಿ ಶ್ರೀಗಳ ಜತೆ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ:
ಆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಈ ಶಾಲೆಗೆ ಸಹಾಯಹಸ್ತ ಚಾಚಬೇಕೆಂಬ ಬೇಡಿಕೆ ಇತ್ತು. ಗೀತಾ ಅವರು ಕಳೆದ ಐದು ವರ್ಷಗಳಿಂದ ಶಕ್ತಿಧಾಮದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈಗ ಈ ಶಾಲೆಗೆ ಯಾವ ರೀತಿ ನೆರವು ನೀಡಬಹುದು ಎಂದು ಚಿಂತನೆ ನಡೆಸಿದ್ದೇವೆ. ಇದು ಬೇಡಿಕೆ ಎನ್ನುವುದಕ್ಕಿಂತ ನಮ್ಮ ಪುಣ್ಯ. ಅವರೊಂದು ಆಫರ್ ಕೊಟ್ಟಿದ್ದಾರೆ. ಏನು ಮಾಡಬಹುದು ಎಂದು ಯೋಚಿಸಿ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದು ಶಿವರಾಜಕುಮಾರ್ ಹೇಳಿದ್ದಾರೆ.