ಬಸವನಬಾಗೇವಾಡಿ: ಮನಗೂಳಿ ಪಟ್ಟಣಕ್ಕೆ ಕುಡಿಯುವ ನೀರು, ರಸ್ತೆ, ಶೌಚಗೃಹ, ಒಳಚರಂಡಿ ಸೇರಿ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಿಕೊಡುವ ಜತೆಗೆ ಪಟ್ಟಣದಲ್ಲಿ ಶೈಕ್ಷಣಿಕವಾಗಿ ಇನ್ನಷ್ಟು ಕಾರ್ಯಗಳನ್ನು ಮಾಡಲಾಗುವುದು ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ,ಜವಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಗೃಹ ಮಂಡಳಿಯಿಂದ 1.50 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕೊಠಡಿ ನಿರ್ಮಾಣ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ 2023/24 ನೇ ಸಾಲಿನ ಎಸ್, ಎಸ್ಟಿ ಯೋಜನೆ ಅಡಿಯಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಮನಗೂಳಿಯಿಂದ ಮಬ್ರುಕರ ವಸತಿ ರಸ್ತೆ ಅಭಿವೃದ್ಧಿ, 25 ಲಕ್ಷ ರೂ. ವೆಚ್ಚದಲ್ಲಿ ಮನಗೂಳಿಯಿಂದ ಇಸ್ಲಾಂಪುರ ತಾಂಡಾದಿಂದ ಹತ್ತರಕಿಹಾಳ ರಸ್ತೆ ಅಭಿವೃದ್ಧಿ, ಪಟ್ಟಣ ಪಂಚಾಯಿತಿ ಕಾರ್ಯಾಲಯದಿಂದ 135 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಂಪೌಂಡ್ ಗೋಡೆ ನಿರ್ಮಿಸುವುದು, ಸಿ.ಸಿ.ರಸ್ತೆ, ಮೌಲಾಲಿ ಭವನ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಲಾಗಿದೆ ಎಂದರು.
ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆದರೆ ಮಾತ್ರ ಕ್ಷೇತ್ರ ಏಳಿಗೆಯತ್ತ ಸಾಗಲು ಸಾಧ್ಯವಾಗುತ್ತದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ವಿಶ್ವನಾಥಗೌಡ ಪಾಟೀಲ, ಮಾಜಿ ಸದಸ್ಯ ಬಸವರಾಜ ಸೋಮಪೂರ, ಪಟ್ಟಣ ಪಂಚಾಯಿತಿ ಸದಸ್ಯರಾದ ಭಾಗ್ಯರಾಜ ಸೊನ್ನದ, ಡಾ. ರಾಮಚಂದ್ರ ಮುದ್ದಾಪೂರ, ಅಜೀತ ಜಾನಕರ, ತಪ್ಪಣ್ಣ ಖ್ಯಾತನವರ, ಪ್ರಕಾಶ ಮನಗೂಳಿ, ಸಲೀಂ ಮಕಾನದಾರ, ಡಾ. ಎಂ.ಡಿ.ಮೈತ್ರಿ, ವಿಜಕುಮಾರ ರಜಪೂತ, ಶಂಕರ ಶಿವಮಂತ, ಮುಖಂಡರಾದ ಶಿವನಗೌಡ ಗುಜಗೊಂಡ, ಸಿದ್ದನಗೌಡ ಬಿರಾದಾರ, ಶಿವಾನಂದ ಗುಜಗೊಂಡ, ರೇವಣಸಿದ್ದ ಕೊಟ್ಟಗೊಂಡ, ಯಲ್ಲಪ್ಪ ಚುಂಚುಳಕರ, ವೀರೇಶ ಹಿರೇಮಠ, ಸಾಯಿರಾಮ ಯಾದವಾಡ, ಜಿ.ಪಂ. ಎ.ಇ.ಇ. ವಿಲಾಸ ರಾಠೋಡ, ಪ.ಪಂ. ಮುಖ್ಯಾಧಿಕಾರಿ ಶಬ್ಬೀರ ರೇವೂರಕರ, ಸಲೀಂ ನಾಗವಾನಿ ಇತರರಿದ್ದರು.