ಮಾಂಜರಿ: ಶೈಕ್ಷಣಿಕ, ಆರೋಗ್ಯ ಮತ್ತು ಸಹಕಾರಿ ಕ್ಷೇತ್ರದಲ್ಲಿ ಅನುಪಮ ಸೇವೆಗೈದಿರುವ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾಲೀಕತ್ವದ ರಾಯಬಾಗ ತಾಲೂಕಿನ ಬಾವನ ಸೌಂದತ್ತಿ ಶಿವಶಕ್ತಿ ಸಕ್ಕರೆ ಕಾರ್ಖಾನೆಗೆ ಬೆಂಗಳೂರಿನಲ್ಲಿ ಈಚೆಗೆ ಜರುಗಿದ ಸಮಾರಂಭದಲ್ಲಿ ಚೆನ್ನೈನ ದಕ್ಷಿಣ ಭಾರತೀಯ ಕಬ್ಬು ಮತ್ತು ಸಕ್ಕರೆ ತಂತ್ರಜ್ಞಾನ ಸಂಘವು ಸಕ್ಕರೆ ಉದ್ಯಮದಲ್ಲಿ ಪ್ರತಿಷ್ಠಿತ ಅತ್ಯುತ್ತಮ ಸಾಧನೆಗಾಗಿ ಅತ್ಯುತ್ತಮ ತಾಂತ್ರಿಕ ದಕ್ಷತೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಶುಗರ್ ಟೆಕ್ನಾಲಜಿ ಅಸೋಸಿಯೇಷನ್ ಅಧ್ಯಕ್ಷ ಎನ್.ಚಿನ್ನಪಣ್ಣ ಮತ್ತು ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಶಿವಶಕ್ತಿ ಸಕ್ಕರೆ ಕಾರ್ಖಾನೆ ಮಾಲೀಕರಾದ ಡಾ.ಪ್ರಭಾಕರ ಕೋರೆ ಮತ್ತು ಅಧಿಕಾರಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಕಾರ್ಖಾನೆ ಹಿರಿಯ ಅಧಿಕಾರಿ ಎನ್.ಎಸ್. ಮುಲ್ಲಾ, ಪನ್ನುಸ್ವಾಮಿ, ಸಂಪತಕುಮಾರ, ರಾಘವೇಂದ್ರ ಪತ್ತಾರ, ರವೀಂದ್ರ ಖಂಡಗಾವೆ ಇತರರು ಉಪಸ್ಥಿತರಿದ್ದರು.
ಕಬ್ಬು ಬೆಳೆಗಾರರಿಗೆ ಇನ್ನೂ ಹೆಚ್ಚಿನ ಸೌಲಭ್ಯ: ಉತ್ತರ ಕರ್ನಾಟಕದಲ್ಲಿ ಸಕ್ಕರೆ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಹಲವು ಪ್ರಯತ್ನ ಮಾಡಲಾಗುತ್ತಿದೆ. ಶಿವಶಕ್ತಿ ಶುಗರ್ಸ್ನಿಂದ ಕಬ್ಬು ಬೆಳೆಗಾರರಿಗೆ ನಿರಂತರ ಸಹಕಾರ ನೀಡಲಾಗುತ್ತಿದೆ. ಕಾರ್ಖಾನೆಯು ಉಪ ಉತ್ಪನ್ನಗಳಾದ ಎಥೆನಾಲ್, ಡಿಸ್ಟಿಲರಿ ಘಟಕ ಹೊಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಮೂಲಕ ಯುವಕರಿಗೆ ಉದ್ಯೋಗ ಒದಗಿಸಲಾಗಿದೆ. ಕಾರ್ಖಾನೆಯ ನಿರ್ದೇಶಕ ಅಮಿತ್ ಕೋರೆ ಅವರು ಕಾರ್ಖಾನೆ ಪ್ರಗತಿಗೆ, ರೈತರಿಗೆ ಉತ್ತಮ ಸೌಲಭ್ಯ ಒದಗಿಸಲು ಶ್ರಮಿಸುತ್ತಿದ್ದು, ಈ ಭಾಗದ ಕಬ್ಬು ಬೆಳೆಗಾರರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಾರ್ಖಾನೆಗೆ ಅತ್ಯುತ್ತಮ ತಾಂತ್ರಿಕ ದಕ್ಷತೆ ಪ್ರಶಸ್ತಿ ಸಂದಿರುವುದು ಕಾರ್ಮಿಕರು, ಸದಸ್ಯರು, ಬೆಳೆಗಾರರ ಶ್ರಮದಿಂದ ಸಾಧ್ಯವಾಗಿದ್ದು, ಹರ್ಷ ತಂದಿದೆ. ಇನ್ಮುಂದೆಯೂ ಕಾರ್ಖಾನೆಯ ಮೂಲಕ ಕಬ್ಬು ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ಉತ್ತಮ ಸೌಲಭ್ಯ ಒದಗಿಸಲು ಶ್ರಮಿಸಲಾಗುವುದು ಎಂದು ಡಾ.ಪ್ರಭಾಕರ ಕೋರೆ ತಿಳಿಸಿದ್ದಾರೆ.