ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ ಸಚಿವ ಸಂಪುಟಕ್ಕೆ ಮೊದಲ ಆಘಾತ ಸ್ವಪಕ್ಷದ ನಾಯಕರಿಂದಲೇ ಎರಗಿದೆ. ಸಚಿವ ಸ್ಥಾನದ ಬಗ್ಗೆ ಅಸಮಾಧಾನಗೊಂಡಿರುವ ಅಬ್ದುಲ್ ಸತ್ತಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಸಮಾಧಾನವನ್ನು ಹೊರ ಹಾಕಿರುವ ಅಬ್ದುಲ್ ಸತ್ತಾರ್, ಡಿಸೆಂಬರ್ 30ರಂದು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸಚಿವ ಸಂಪುಟ ಸೇರಿದ ನಾಲ್ವರು ಮುಸ್ಲಿಮರ ಪೈಕಿ ಇವರೂ ಒಬ್ಬರು. ಎನ್ಸಿಪಿಯಿಂದ ನವಾಬ್ ಮಲಿಕ್ ಮತ್ತು ಹಸನ್ ಮುಶ್ರಿಫ್, ಕಾಂಗ್ರೆಸ್ ನಿಂದ ಅಸ್ಲಾಂ ಶೇಖ್ ಕೂಡ ಸಚಿವರಾಗಿದ್ದಾರೆ. ಸತ್ತಾರ್ ಹೊರತುಪಡಿಸಿ ಉಳಿದವರು ಕ್ಯಾಬಿನೆಟ್ ದರ್ಜೆಯ ಸಚಿವರು.
ಮೂಲತಃ ಸತ್ತಾರ್ ಕಾಂಗ್ರೆಸ್ ನವರಾಗಿದ್ದು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಶಿವಸೇನೆಯನ್ನು ಸೇರಿದ್ದರು.
ಇದೇ ವೇಳೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ಅಬ್ದುಲ್ ಸತ್ತಾರ್ ಸಚಿವ ಸಂಪುಟ ತ್ಯಜಿಸಿಲ್ಲ. ಅವರು ರಾಜೀನಾಮೆ ಸಲ್ಲಿಸಿಲ್ಲ ಅಥವಾ ಅಂತಹ ಯಾವುದೇ ಪತ್ರವನ್ನು ರವಾನಿಸಿಲ್ಲ ಎಂದು ಶಿವಸೇನೆಯ ರಾಜ್ಯಸಭಾ ಸದಸ್ಯ ಅನಿಲ್ ದೇಸಾಯಿ ಐಎಎನ್ಎಸ್ಗೆ ತಿಳಿಸಿದ್ದಾರೆ.
ಈ ನಡುವೆ, ಸತ್ತಾರ್ ಪುತ್ರ ಸಮೀರ್ ಕೂಡ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಯಾವುದೇ ಮಾಹಿತಿ ನನಗೆ ಇಲ್ಲ. ಅವರೇ ಈ ಬಗ್ಗೆ ಶೀಘ್ರವೇ ಮಾತನಾಡಲಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್)
Sameer Sattar,son of Shiv Sena leader Abdul Sattar on reports that Abdul Sattar is unhappy and has resigned as Maharashtra minister: I have no information about this, only he can speak on it and I am sure he will speak soon, better to wait and watch. pic.twitter.com/ISLm4ujwGX
— ANI (@ANI) January 4, 2020