ಮುಂಬೈ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ವಿರೋಧಿ ಪ್ರತಿಭಟನೆಯಲ್ಲಿ ಶಿವಸೇನಾ ನಾಯಕ ಹಾಗೂ ಸಚಿವ ಆದಿತ್ಯ ಠಾಕ್ರೆ ಭಾಗಿಯಾಗುತ್ತಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಶಿವಸೇನೆ ಪ್ರತಿಕ್ರಿಯೆ ನೀಡಿ, ವಿವಾದ ಆಗುವ ಮುನ್ನವೇ ಅಂತ್ಯವಾಡುವ ಪ್ರಯತ್ನ ಮಾಡಿದೆ.
ಶನಿವಾರ ಟ್ವೀಟ್ ಮಾಡಿರುವ ಶಿವಸೇನೆ ಸಿಎಎ, ಎನ್ಆರ್ಸಿ ವಿರೋಧಿ ಛ್ಛತ್ರಾ ಪರಿಷದ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಆದಿತ್ಯ ಠಾಕ್ರೆ ಭಾಗವಹಿಸುತ್ತಾರೆ ಎಂಬುದಕ್ಕೆ ಅವರಿಂದ ಯಾವುದೇ ಖಚಿತತೆ ತಿಳಿದುಬಂದಿಲ್ಲ. ಅವರ ಯಾವುದೇ ವೇಳಾಪಟ್ಟಿ ಮತ್ತು ಕಾರ್ಯಕ್ರಮ ಹಾಜರಾತಿ ಮಾಹಿತಿ ಬೇಕಾದರೆ ಯಾರಾದರೂ ಕೂಡ ಶಿವಸೇನಾ ಅಧಿಕೃತ ಸಂವಹನ ತಂಡವನ್ನು ಸಂಪರ್ಕಿಸಬಹುದು ಎಂದು ಶಿವಸೇನೆ ಹೇಳಿದೆ.
ಸಿಎಎ ವಿರೋಧಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಆದಿತ್ಯ ಠಾಕ್ರೆ ಉಪಸ್ಥಿತರಿರಲಿದ್ದಾರೆ ಎಂಬ ಆಹ್ವಾನ ಪತ್ರಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಸಾಕಷ್ಟು ವಿರೋಧ ಕೇಳಿಬಂದ ಬೆನ್ನಲ್ಲೇ ಶಿವಸೇನಾ ಸ್ಪಷ್ಟನೆ ನೀಡಿದೆ.
ಆಹ್ವಾನ ಪತ್ರಿಕೆಯ ಪ್ರಕಾರ ಆದಿತ್ಯ ಠಾಕ್ರೆ, ಸಾಹಿತಿ ಜಾವೇದ್ ಅಖ್ತರ್, ಕಾರ್ಯಕರ್ತ ಉಮರ್ ಖಲೀದ್, ರಾಮಾ ನಾಗ, ರೋಹಿತ್ ಪವಾರ್ ಮತ್ತು ಇತರರೊಂದಿಗೆ ಮುಂಬೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್)