ಬೆಂಗಳೂರು ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡ ಎಡಗೈ ಆರಂಭಿಕ ಶಿಖರ್ ಧವನ್ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳುವುದು ಅನುಮಾನವೆನಿಸಿದೆ. ಅವರ ಎಡ ಭುಜದ ಎಕ್ಸ್-ರೇ ಪರೀಕ್ಷೆ ಮಾಡಲಾಗಿದ್ದು, ಗಾಯದ ಗಂಭೀರತೆ ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಅವರು ಕಿವೀಸ್ ಪ್ರವಾಸಕ್ಕೆ ವಿಮಾನ ಏರುವ ಬಗ್ಗೆಯೂ ಸ್ಪಷ್ಟತೆ ಸಿಕ್ಕಿಲ್ಲ.
ಪಂದ್ಯದ 5ನೇ ಓವರ್ನಲ್ಲೇ ಗಾಯಗೊಂಡು ಮೈದಾನ ತೊರೆದ ಅವರು, ಬಳಿಕ ಆರಂಭಿಕರಾಗಿ ಬ್ಯಾಟಿಂಗ್ಗೂ ಇಳಿಯಲಿಲ್ಲ. ಆದರೆ ಕೊನೆಯಲ್ಲಿ ಭಾರತ ತಂಡ ಟ್ರೋಫಿಯೊಂದಿಗೆ ಸಂಭ್ರಮಿಸುವಾಗ ಎಡತೋಳಿಗೆ ಆಸರೆಯಾಗಿ ಕತ್ತಿಗೆ ಕಟ್ಟಿದ ಕಪು್ಪ ಬ್ಯಾಂಡೇಜಿನೊಂದಿಗೆ ಕಾಣಿಸಿಕೊಂಡಿದ್ದರು. 34 ವರ್ಷದ ಧವನ್ಗೆ ಗಾಯಗಳು ಹೊಸದಲ್ಲ. ರಾಜ್ಕೋಟ್ನಲ್ಲಿ ನಡೆದ 2ನೇ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುವಾಗ ಪಕ್ಕೆಲುಬಿಗೆ ಚೆಂಡೇಟು ತಿಂದು ಗಾಯಗೊಂಡಿದ್ದರು ಮತ್ತು ಆಸೀಸ್ ಇನಿಂಗ್ಸ್ ಪೂರ್ತಿ ಫೀಲ್ಡಿಂಗ್ ಮಾಡಿರಲಿಲ್ಲ.
ಕಳೆದ ವರ್ಷ ವಿಶ್ವಕಪ್ನಲ್ಲೂ ಆಸೀಸ್ ವಿರುದ್ಧದ ಪಂದ್ಯದ ವೇಳೆ ಕೈಹೆಬ್ಬೆರಳು ಮುರಿತಕ್ಕೊಳಗಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಇತ್ತೀಚೆಗೆ ದೇಶೀಯ ಕ್ರಿಕೆಟ್ನಲ್ಲಿ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮೊಣಕಾಲು ಗಾಯಕ್ಕೆ ತುತ್ತಾಗಿ 27 ಹೊಲಿಗೆಗಳನ್ನು ಹಾಕಿಸಿಕೊಂಡಿದ್ದರು. -ಪಿಟಿಐ