ಬೆಳಗಾವಿ: ಶೂನ್ಯ ಬಡ್ಡಿ ದರದಲ್ಲಿ ಸಾಲ, ಮೃತ ಕುರಿಗಳಿಗೆ ಪರಿಹಾರ ಸೇರಿದಂತೆ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಸೋಮವಾರ ನಗರದ ಪಶುವೈದ್ಯಕೀಯ ಸೇವಾ ಇಲಾಖೆ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಿಲ್ಲಾ ಕುರಿಗಾರರು ಮತ್ತು ಕುರಿ ಸಾಕಣಿಕೆದಾರರ ಸಹಕಾರ ಸಂಘಗಳ ನೇತೃತ್ವದಲ್ಲಿ ಕುರಿಗಾರರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕುರಿಗಾರರಿಗೆ ಕುರಿ ಮೇಯಿಸಲು ಸ್ವಂತ ಜಮೀನು ಇಲ್ಲದಿರುವ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶ ಅವಲಂಬಿಸಬೇಕಾಗಿದೆ. ಹಾಗಾಗಿ ಅರಣ್ಯ ಪ್ರದೇಶಗಳು ನಾಶವಾಗದಂತೆ ಕ್ರಮ ವಹಿಸಬೇಕು. ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸಲು ಅನುಮತಿ ನೀಡಬೇಕು. ಕುರಿಗಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪದಾಧಿಕಾರಿಗಳು ಕೋರಿದರು.
ಹಿಂದಿನ ಸರ್ಕಾರಗಳು ಆಕಸ್ಮಿಕವಾಗಿ ಮರಣ ಹೊಂದಿ ಕುರಿ, ಮೇಕೆ ಹಾಗೂ ಅವುಗಳ ಮರಿಗಳಿಗೆ ಪರಿಹಾರ ನೀಡುವ ಯೋಜನೆ ಜಾರಿಗೆ ತಂದಿದ್ದವು. 3 ರಿಂದ 4 ತಿಂಗಳ ಮರಿಗಳು ಮೃತಪಟ್ಟರೆ 2,500 ಮತ್ತು 6 ತಿಂಗಳ ನಂತರ ಮೃತಪಟ್ಟ ಕುರಿ, ಮೇಕೆಗಳಿಗೆ 5,000 ರೂ. ವರೆಗೆ ಪರಿಹಾರ ನೀಡಲಾಗುತ್ತಿತ್ತು. ಆದರೆ, ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ.
ಹಾಗಾಗಿ ಶೀಘ್ರ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಸಹಕಾರ ಸಂಘಗಳ ಅಧ್ಯಕ್ಷ ಪಂಡಿತರಾವ ಚಿದ್ರಿ, ಜಿಪಂ ಸದಸ್ಯ ಮಡ್ಡೆಪ್ಪ ತೋಳಿನವರ, ಶ್ರೀಶೈಲ ಪೂಜೇರ, ಬಿ.ಆರ್.ರಾಮನಗಟ್ಟಿ, ಎ.ಬಿ.ಹೆಗಡೆ ಇತರರು ಇದ್ದರು.