ಬೇಲೂರು: ಪಟ್ಟಣದ ಅಂತರಘಟ್ಟಮ್ಮ ದೇವಾಲಯದ ಆವರಣದಲ್ಲಿ ದೇವರ ಜಾತ್ರಾ ಮಹೋತ್ಸವದಲ್ಲಿ ದಾಸೋಹ ವ್ಯವಸ್ಥೆಗೆ ಸಿದ್ಧತೆ ಕೈಗೊಳ್ಳುತ್ತಿದ್ದ ಸಂದರ್ಭ ಶಾಮಿಯಾನದ ಪೈಪ್ ತಲೆ ಮೇಲೆ ಬಿದ್ದಿದ್ದರಿಂದ ವ್ಯಕ್ತಿಯೊಬ್ಬರು ಮಂಗಳವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾಯಾಪುರ ಗ್ರಾಮದ 65 ವರ್ಷದ ನಂಜೇಗೌಡ(ನಂಜುಂಡಣ್ಣ) ಮೃತಪಟ್ಟವರು.
ರಾಯಪುರ ಗ್ರಾಮ ದೇವತೆ ಅಂತರಘಟ್ಟಮ್ಮನವರ ಕೊಂಡೋತ್ಸವ ಹಾಗೂ ಸಿಡಿ ಮಹೋತ್ಸವ ಅಂಗವಾಗಿ ನಂಜೇಗೌಡ(ನಂಜುಂಡಣ್ಣ) ಮತ್ತಿತರರು ಅಂತರಘಟ್ಟಮ್ಮ ದೇಗುಲದ ಆವರಣದಲ್ಲಿ ಸಿದ್ಧತೆಯಲ್ಲಿ ತೊಡಗಿದ್ದರು. ಈ ನಡುವೆ ನಂಜುಂಡೇಗೌಡರು ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಮಧ್ಯಾಹ್ನದ ದಾಸೋಹ ವ್ಯವಸ್ಥಿತವಾಗಿ ನಡೆಯಬೇಕೆಂದು ಚಿಂತಿಸಿ ಸ್ವತ: ಮುಂದೆ ನಿಂತು ಕೆಲಸ ಮಾಡಿಸುತ್ತಿದ್ದರು. ಈ ಸಮಯದಲ್ಲಿ ಸಾಮಗ್ರಿಗಳನ್ನು ತುಂಬಿಕೊಂಡು ಬಂದ ಟ್ರಾೃಕ್ಟರ್ನ ಟ್ರಾೃಲಿ ಹಿಂಬದಿಯಿಂದ ಶಾಮಿಯಾನದ ಪೈಪ್ಗೆ ಗುದ್ದಿದೆ. ಈ ಸಂದರ್ಭ ಕಬ್ಬಿಣದ ಪೈಪು ನಂಜೇಗೌಡರ(ನಂಜುಂಡಣ್ಣ)ರ ತಲೆಮೇಲೆ ಬಿದ್ದಿದ್ದು, ಪರಿಣಾಮ ಅವರು ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ.
ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಸಂಜೆ ನೆರವೇರಿತು. ಘಟನೆ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸೂತಕ ಮನೆಯಂತಾದ ರಾಯಾಪುರ: ಅಂತರಘಟ್ಟಮ್ಮನವರ ಜಾತ್ರಾ ಮಹೋತ್ಸವ ಪೂರ್ವಿಕರ ಕಾಲದಿಂದಲೂ ನಡೆಯುತ್ತಿದೆ. ಕಸಬಾ ಹೋಬಳಿಯ ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸುವುದಲ್ಲದೆ ಕೊಂಡ ಹಾಯುತ್ತಾರೆ. ದೇವರಿಗೆ ರಾಯಾಪುರ ಗ್ರಾಮಸ್ಥರಿಂದಲೇ ಪ್ರಥಮ ಪೂಜೆ ಸಲ್ಲಿಕೆಯಾಗಬೇಕಿತ್ತು. ಆದರೆ ಮಂಗಳವಾರ ನಡೆದ ಕಹಿ ಘಟನೆಯಿಂದ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಕೊಂಡೋತ್ಸವದಲ್ಲಿ ಯಾರೂ ಭಾಗವಹಿಸದೆ ದುಖಿತರಾಗಿದ್ದಾರೆ.