ಗದಗ: ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಸಂತ ಸೇವಾಲಾಲ ಅವರ ಜಯಂತಿಯನ್ನು ಗದಗ ಬೆಟಗೇರಿ ನಗರಾಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಜಿ ಹಾಗೂ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಅವರು ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಸಂತ ಸೇವಾಲಾಲ್ರ ಜಯಂತಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಮಾತನಾಡಿ ಭಾರತ ದೇಶದ ನೆಲದಲ್ಲಿ ಹಲವು ಸಂತರು, ಧರ್ಮ ಸುಧಾರಕರು, ತತ್ವಜ್ಞಾನಿಗಳು ಜನ್ಮ ತಾಳಿ ಜನರಲ್ಲಿನ ಅಜ್ಞಾನ ಅಂಧಕಾರವನ್ನು ಹೋಗಲಾಡಿಸಿದ್ದಾರೆ. ಇಂತಹ ಮಹಾನ್ ಸಂತರುಗಳಲ್ಲಿ ಸಂತ ಸೇವಾಲಾಲ್ ಮಹಾರಾಜರು ಒಬ್ಬರಾಗಿದ್ದಾರೆ.
ಸಂತ ಸೇವಾಲಾಲರು ಶ್ರೇಷ್ಠ ದಾರ್ಶನಿಕರು. ಶ್ರೇಷ್ಠ ವ್ಯಕ್ತಿತ್ವ ಹೊಂದಿದ್ದ ಸಂತ ಸೇವಾಲಾಲರು ಲೋಕಕಲ್ಯಾಣಕ್ಕಾಗಿ ಶ್ರಮಿಸಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು. ಅವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾದ ಅಗತ್ಯತೆಯಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವಕೀಲರು ಹಾಗೂ ಗೋರ ಸೇನಾ ಸಂಘದ ರಾಜ್ಯಾಧ್ಯಕ್ಷರಾದ ರವಿಕಾಂತ ಅಂಗಡಿ ಅವರು ಮಾತನಾಡಿ ಸಂತ ಸೇವಾಲಾಲರು ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಕರಾಗಿದ್ದಾರೆ. ಮೂಢನಂಬಿಕೆ ವಿರುದ್ದ ಹೋರಾಡಿದ ವಿವೇಚನಾಶೀಲರೂ ಆಗಿದ್ದ ಇವರು ಜಗದಂಬಾದೇವಿಯ ಭಕ್ತರಾಗಿದ್ದರು. ಸೇವಾಲಾಲರು ತಮ್ಮ ಲೀಲೆಗಳ ಹಾಗೂ ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ಗುರುವಿನ ಸ್ಥಾನವನ್ನು ಪಡೆದರು ಎಂದು ಹೇಳಿದರು.
ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಮಾಜಕ್ಕೆ ಸಾರಿದರು. ಮಾನವ ಜನ್ಮ ಪವಿತ್ರವಾದದ್ದು ಇದನ್ನು ಹಾಳು ಮಾಡಿಕೊಳ್ಳಬೇಡಿ, ವ್ಯಸನಗಳಿಂದ ದೂರವಿರಿ. ಅರಿಷಡ್ ವರ್ಗಗಳನ್ನು ಸುಟ್ಟುಹಾಕಿ, ಪ್ರಾಮಾಣಿಕರಾಗಿ ಜೀವಿಸಿ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿರಿ ಎಂದು ತಿಳಿಸಿದ್ದಾರೆ. ಸಂತ ಸೇವಾಲಾಲರು ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಎಲ್ಲರೂ ಶಿಕ್ಷಿತರಾಗಿ ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿದೀಪವಾಗಬೇಕು ಎಂದು ಸಾರಿದ್ದಾರೆ ಎಂದು ರವಿಕಾಂತ ಅಂಗಡಿ ಅವರು ತಿಳಿಸಿದರು.
ಸಮಾಜದ ಮುಖಂಡರಾದ ಪಾಂಡು ಚವ್ಹಾಣ ಅವರು ಮಾತನಾಡಿ ಸಂತ ಸೇವಾಲಾಲರು ಶ್ರೇಷ್ಠ ದಾರ್ಶನಿಕರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆಯನ್ನು ಮೂಡಿಸಲು ಪ್ರೇರೇಪಿಸಿದ ಮಹಾತ್ಮರು ಸಂತ ಸೇವಾಲಾಲರು ಆಗಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಮಹೇಶ ಪೋತದಾರ, ತಹಶೀಲ್ದಾರರಾದ ಶ್ರೀನಿವಾಸಮೂರ್ತಿ ಕುಲಕರ್ಣಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಗುಂಜೀಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ, ಡಾವ ಕಾರಭಾರಿ, ಐ.ಎಸ್.ಪೂಜಾರ, ಚಂದ್ರು ಚವ್ಹಾಣ, ಪರಮೇಶ ನಾಯ್ಕ, ಭೀಮಸಿಂಗ್ ರಾಠೋಡ, ಟಿ.ಡಿ. ಪೂಜಾರ, ಕುಬೇರಪ್ಪ ಪವಾರ, ಕೆ.ಸಿ.ನಭಾಪುರ, ನೀಲು ರಾಠೋಡ, ಠಾಕೋರ ಜಾಧವ,ಸೋಮು ಲಮಾಣಿ, ಚಂದು ನಾಯ್ಕ , ಕೃಷ್ಣ ಲಮಾಣಿ, ಲೋಕೇಶ ಕಟ್ಟಿಮನಿ, ನೂರಪ್ಪ ನಾಯ್ಕ , ದಯಾನಂದ , ಧನಸಿಂಗ್ ನಾಯ್ಕ , ಪುಟ್ಟಪ್ಪ ಚನ್ನಳ್ಳಿ ಧನ್ನುರಾಮ್ ತಂಬೂರಿ, ಪಾಂಡುರAಗ ನಾಯ್ಕ್ , ಟಿ.ಬಿ.ಜಾಧವ, ಅಮಜಪ್ಪ ಲಮಾಣಿ, ಶಿವು ನಾಯ್ಕ , ರಮೇಶ ರಾಠೋಡ, ಚನ್ನಪ್ಪ ಲಮಾಣಿ, ಠಾಕೂರ ಲಮಾಣಿ, ಈಶ್ವರ ನಾಯ್ಕ , ಅನಿಲ ಕಾರಬಾರಿ , ಸುಭಾಸ ಲಮಾಣಿ, ಪರಶುರಾಮ್ ಗುಡಿಮನಿ ಸೇರಿದಂತೆ ಸಮಾಜದ ಮುಖಂಡರು, ಗಣ್ಯರು, ಹಿರಿಯರು, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.