ಕಲಬುರಗಿ: ದೇಶದ ಕೃಷಿ, ಉದ್ಯಮ, ಸೇವಾ ವಲಯಗಳಲ್ಲಿ ಆಮೂಲಾಗ್ರ ಬದಲಾವಣೆ ಆದಾಗಲೇ ಭಾರತ ಅಭಿವೃದ್ಧಿ ಪಟ್ಟಿಯಲ್ಲಿ ಇರಲಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಸಚಿವ ಡಾ.ಆರ್.ಆರ್. ಬಿರಾದಾರ್ ಅಭಿಪ್ರಾಯಪಟ್ಟರು.
ನಗರದ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ೨೦೪೭ರವರೆಗೆ ವಿಕಸಿತ ಭಾರತವಾಗಲು ಹಲವಾರು ಕ್ರಮಗಳ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಜಿಡಿಪಿ ವೃದ್ಧಿ ಹೊಂದಬೇಕಾದರೆ ಒಟ್ಟಾರೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಏರಿಕೆಯಾಗಬೇಕು. ಅಂದರೆ ಬಡತನ, ನಿರುದ್ಯೋಗ, ಲಿಂಗ ತಾರತಮ್ಯ, ಪ್ರಾದೇಶಿಕ ಅಸಮತೋಲನ ಇತರ ಪ್ರಕಾರಗಳಲ್ಲಿ ಇಳಿಕೆಯಾಗಿ ಶಿಕ್ಷಣ, ಆರೋಗ್ಯ, ಕೌಶಲ ಏರಿಕೆಯಾಗಬೇಕು. ಮೂಲಸೌಕರ್ಯ ಹೆಚ್ಚಳ, ಉತ್ಪಾದನೆ ಬೇಡಿಕೆಗೆ ತಕ್ಕಂತೆ ಉತ್ಪಾದಿಸಿ ಪೂರೈಸಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಕಾಳಗಿಯ ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ.ಬಿ.ಆರ್. ಅಣ್ಣಾಸಾಗರ ಮಾತನಾಡಿ, ತಾಂತ್ರಿಕ, ಆವಿಷ್ಕಾರಿಕ ಸಿದ್ಧಾಂತಗಳ ಬಳಕೆಯಿಂದ ಆರ್ಥಿಕವಾಗಿ ಸದೃಢ ಹೊಂದಿದರೆ ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕಲ್ಪನೆ ಸಾಕಾರಗೊಳ್ಳಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಶರಥ ಮೇತ್ರೆ ಮಾತನಾಡಿ, ಜಪಾನ್ನಂತಹ ದೇಶ ಭಾರತದ ಜತೆಗೆ ಸ್ವಾತಂತ್ರ್ಯಪಡೆದು ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿ ಸೇರಿದೆ. ಆದರೆ ಭಾರತ ೭೫ ವರ್ಷವಾದರೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿಯಲ್ಲಿದೆ. ಹೀಗಾಗಿ ೨೦೪೭ರವರೆಗೆ ಗುರಿ ಮುಟ್ಟಲು ಶಕ್ತಿಮೀರಿ ಕೆಲಸ ಮಾಡಬೇಕಾಗಿದೆ. ಯುವಕರು ಇದರಲ್ಲಿ ಬಹು ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಹೇಳಿದರು.
ಡಾ.ಸುನಂದಾ ವಾಂಜರಖೇಡೆ ಸ್ವಾಗತಿಸಿದರು. ಪ್ರೊ.ಆರತಿ ಜಿ., ಡಾ.ಅನಿತಾ ಮೇತ್ರೆ ಅತಿಥಿಗಳನ್ನು ಪರಿಚಯಿಸಿದರು, ಪ್ರೊ.ವರ್ಷಾ ಪಾಟೀಲ್ ವಂದಿಸಿದರು. ಪ್ರೊ.ದಯಾನಂದ ಹೊಡಲ್ ನಿರೂಪಣೆ ಮಾಡಿದರು. ನಂದಕುಮಾರ ಪ್ರಾರ್ಥಿಸಿದರು.
ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತ ಮುಂದುವರಿದ ರಾಷ್ಟ್ರಗಳಂತೆ ಆಗಲು ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕೆ ಕೃಷಿ ಕ್ಷೇತ್ರಗಳಲ್ಲಿ ಬಂಡವಾಳ ದ್ವಿಗುಣಗೊಳ್ಳಬೇಕು. ಆಗಲೇ ನಿರುದ್ಯೋಗ ನಿವಾರಣೆಯಾಗಿ ಉದ್ಯೋಗ ದೊರಕಿ ತಲಾ ಮತ್ತು ರಾಷ್ಟ್ರೀಯ ಆದಾಯ ಹೆಚ್ಚಳಕ್ಕೆ ಪೂರಕವಾಗಲಿದೆ.
| ಪ್ರೊ.ಆರ್.ಆರ್.ಬಿರಾದಾರ್ ಕುಲಸಚಿವ, ಸಿಯುಕೆ