More

    ಇಂದೋರ್​ನಲ್ಲಿ ಇಂದು 2ನೇ ಏಕದಿನ; ಭಾರತಕ್ಕೆ ಸರಣಿ ಗೆಲುವಿನ ಹಂಬಲ

    ಇಂದೋರ್​: ಪ್ರಮುಖ ಆಟಗಾರರ ಗೈರಿನಲ್ಲೂ ಏಷ್ಯಾಕಪ್​ ಗೆಲುವಿನ ಲಯವನ್ನು ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಾಯ್ದುಕೊಂಡಿರುವ ಭಾರತ ತಂಡ ಇದೀಗ ಸರಣಿ ವಶಪಡಿಸಿಕೊಳ್ಳಲು ಸಜ್ಜಾಗಿದೆ. ಹೋಳ್ಕರ್​ ಸ್ಟೇಡಿಯಂನಲ್ಲಿ ಭಾನುವಾರ ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಕೆಎಲ್​ ರಾಹುಲ್​ ಪಡೆ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. ಅತ್ತ ಆಸ್ಟ್ರೆಲಿಯಾಕ್ಕೆ ಸರಣಿ ಜೀವಂತವಿಡಲು ಗೆಲ್ಲಲೇಬೇಕಾದ ಒತ್ತಡ ಎದುರಾಗಿದೆ.

    ತವರಿನ ವಿಶ್ವಕಪ್​ಗೆ ಮುನ್ನ ವಿಶ್ವಾಸ ವೃದ್ಧಿಸುವಂತ ನಿರ್ವಹಣೆ ಭಾರತ ತಂಡದಿಂದ ಬರುತ್ತಿದೆ. ಇದರ ಜತೆಗೆ ಹಲವು ಪ್ಲಸ್​ ಪಾಯಿಂಟ್​ಗಳು ಕಾಣಿಸುತ್ತಿವೆ. ವೇಗಿಗಳ ಭರ್ಜರಿ ಬೌಲಿಂಗ್​, ಅಗ್ರ ಕ್ರಮಾಂಕದ ರನ್​ಪ್ರವಾಹ ಇದರಲ್ಲಿ ಪ್ರಮುಖವಾದವುಗಳು. ಸೂರ್ಯಕುಮಾರ್​ ಸಕಾಲದಲ್ಲಿ ಲಯ ಕಂಡುಕೊಂಡಂತಿದೆ. ಇದರ ನಡುವೆ ಕೆಲ ಹಿನ್ನಡೆಗಳೂ ಇವೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಶ್ರೇಯಸ್​ ಅಯ್ಯರ್​ ಅವರಿಂದ ಇನ್ನೂ ದೊಡ್ಡ ಇನಿಂಗ್ಸ್​ ಬಂದಿಲ್ಲ. ಗಾಯ ಮರುಕಳಿಸಿದ ಕಾರಣ ಏಷ್ಯಾಕಪ್​ನಲ್ಲಿ ಕೆಲ ಪಂದ್ಯಗಳನ್ನು ತಪ್ಪಿಸಿಕೊಂಡ ಶ್ರೇಯಸ್​, ವಿಶ್ವಕಪ್​ನಲ್ಲಿ 4ನೇ ಕ್ರಮಾಂಕಕ್ಕೆ ಪ್ರಮುಖ ಆಕಾಂಯಾಗಿದ್ದಾರೆ. ವಿಶ್ವಕಪ್​ ತಂಡಕ್ಕೆ ಸೇರುವ ರೇಸ್​ನಲ್ಲಿರುವ ಅನುಭವಿ ಸ್ಪಿನ್ನರ್​ ಆರ್​. ಅಶ್ವಿನ್​ರಿಂದ ಇನ್ನಷ್ಟು ಪರಿಣಾಮಕಾರಿ ಬೌಲಿಂಗ್​ ಕೂಡ ನಿರೀಸಲಾಗುತ್ತಿದೆ. ಇನ್ನು ಬೌಲಿಂಗ್​ ಆಲ್ರೌಂಡರ್​ ಆಗಿ ಸ್ಥಾನ ಪಡೆದಿರುವ ಶಾರ್ದೂಲ್​ ಠಾಕೂರ್​ ಮೊಹಾಲಿಯಲ್ಲಿ 10 ಓವರ್​ಗಳಲ್ಲಿ 78 ರನ್​ ನೀಡಿ ದುಬಾರಿ ಎನಿಸಿದ್ದರು. ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿರುವುದನ್ನು ಸಮರ್ಥಿಸುವಂಥ ನಿರ್ವಹಣೆ ಅವರಿಂದ ಬರಬೇಕಿದೆ.

    ರಾಜ್​ಕೋಟ್​ನಲ್ಲಿ ನಡೆಯಲಿರುವ ಕೊನೇ ಪಂದ್ಯಕ್ಕೆ ಭಾರತದ ಪ್ರಮುಖ ಆಟಗಾರರು ಮರಳಲಿದ್ದಾರೆ. ಅದೇ ರೀತಿ ಆಸೀಸ್​ಗೂ ಕೊನೇ ಪಂದ್ಯದವರೆಗೆ ಕೆಲ ಪ್ರಮುಖ ಆಟಗಾರರ ಗೈರು ಕಾಡುವ ಸಾಧ್ಯತೆಗಳಿವೆ. ಆದರೆ ಕೊನೇ ಪಂದ್ಯದಲ್ಲಿ ಪೂರ್ಣ ಸಾಮರ್ಥ್ಯ ಪ್ರದರ್ಶಿಸುವ ಮುನ್ನ ಸರಣಿ ಜೀವಂತವಿಡುವ ಒತ್ತಡವೂ ಪ್ಯಾಟ್​ ಕಮ್ಮಿನ್ಸ್​ ಬಳಗದ ಮೇಲಿದೆ. ಮೊಹಾಲಿಯಲ್ಲಿ ಡೇವಿಡ್​ ವಾರ್ನರ್​ ಉತ್ತಮ ಆರಂಭ ಒದಗಿಸಿದ್ದರೂ, ನಂತರ ಆಸೀಸ್​ ಬ್ಯಾಟಿಂಗ್​ ಕ್ರಮಾಂಕ ಲಯ ತಪ್ಪಿತ್ತು.

    ಟೀಮ್​ ನ್ಯೂಸ್​:
    ಭಾರತ: ಮೊಹಮದ್​ ಸಿರಾಜ್​ ಮತ್ತು ಜಸ್​ಪ್ರೀತ್​ ಬುಮ್ರಾ ಅವರಿಬ್ಬರು ಸರಣಿಯಲ್ಲಿ 2 ಪಂದ್ಯ ಮಾತ್ರ ಆಡಲಿದ್ದಾರೆ ಎಂದು ಮೊದಲೇ ಸುಳಿವು ನೀಡಲಾಗಿತ್ತು. ಇದರನ್ವಯ ಮೊದಲ ಪಂದ್ಯದಲ್ಲಿ ಸಿರಾಜ್​ಗೆ ವಿಶ್ರಾಂತಿ ನೀಡಿರುವುದರಿಂದ ಈ ಬಾರಿ ಅವರು ಮರಳಿದರೆ, ಬುಮ್ರಾಗೆ ವಿಶ್ರಾಂತಿ ನೀಡಬಹುದು. ವಾಷಿಂಗ್ಟನ್​ ಸುಂದರ್​ಗಾಗಿ ಋತುರಾಜ್​ ಗಾಯಕ್ವಾಡ್​ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ಇದ್ದು, ಆಗ ಇಶಾನ್​ ಕಿಶನ್​ ಆರಂಭಿಕರಾಗಬಹುದು.

    ಆಸ್ಟ್ರೆಲಿಯಾ: ಫಿಟ್ನೆಸ್​ ಸಮಸ್ಯೆ ಹೊಂದಿರುವ ಮಾರ್ಕಸ್​ ಸ್ಟೋಯಿನಿಸ್​ ಈ ಬಾರಿ ಹೊರಗುಳಿದರೆ, ಆರನ್​ ಹಾರ್ಡಿ ಅಥವಾ ಜೋಶ್​ ಹ್ಯಾಸಲ್​ವುಡ್​ ಆಡಬಹುದು. ಅಲೆಕ್ಸ್​ ಕ್ಯಾರಿ ವಿಕೆಟ್​ ಕೀಪರ್​ ಆಗಿ ತಂಡಕ್ಕೆ ಮರಳುವ ನಿರೀಕ್ಷೆ ಇದ್ದು, ಆಗ ಮ್ಯಾಥ್ಯೂ ಶಾರ್ಟ್​ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಮಿಚೆಲ್​ ಸ್ಟಾರ್ಕ್​, ಗ್ಲೆನ್​ ಮ್ಯಾಕ್ಸ್​ವೆಲ್​ ಈ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.

    ಆರಂಭ: ಮಧ್ಯಾಹ್ನ 1.30
    ನೇರಪ್ರಸಾರ: ಸ್ಪೋರ್ಟ್ಸ್​18, ಜಿಯೋಸಿನಿಮಾ.

    ನಂ. 1 ಪಟ್ಟ ಕಾಯ್ದುಕೊಳ್ಳುವ ಸವಾಲು
    ಮೊಹಾಲಿಯಲ್ಲಿ ಗೆಲ್ಲುವ ಮೂಲಕ ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ ನಂ. 1 ಪಟ್ಟಕ್ಕೇರಿದ ಭಾರತ, ಎಲ್ಲ 3 ಮಾದರಿಯ ರ್ಯಾಂಕಿಂಗ್​ನಲ್ಲಿ ಏಕಕಾಲದಲ್ಲಿ ಅಗ್ರಸ್ಥಾನಕ್ಕೇರಿದ ಅಪರೂಪದ ಸಾಧನೆ ಮಾಡಿದೆ. ಭಾರತ ಈಗ ಏಕದಿನ ನಂ. 1 ಪಟ್ಟವನ್ನು ಕಾಯ್ದುಕೊಳ್ಳಬೇಕಾದರೆ 2ನೇ ಪಂದ್ಯದಲ್ಲೂ ಗೆಲ್ಲಬೇಕಾಗಿದೆ. ಆಗ ತವರಿನ ವಿಶ್ವಕಪ್​ನಲ್ಲಿ ನಂ. 1 ತಂಡವಾಗಿ ಅಭಿಯಾನ ಆರಂಭಿಸಬಹುದು. ಇಂದೋರ್​ನಲ್ಲಿ ಸೋತರೆ ಭಾರತ ಮತ್ತೆ ನಂ. 1 ಪಟ್ಟವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲಿದೆ. ಆಗ ಕೊನೇ ಪಂದ್ಯದಲ್ಲಿ ಗೆದ್ದರೆ ಮತ್ತೆ ನಂ. 1 ಪಟ್ಟಕ್ಕೇರುವ ಅವಕಾಶವೂ ಭಾರತಕ್ಕೆ ಇರಲಿದೆ. ಒಂದು ವೇಳೆ ಭಾರತ ಕೊನೇ 2 ಪಂದ್ಯದಲ್ಲೂ ಸೋತರೆ, ಪಾಕಿಸ್ತಾನಕ್ಕೆ ವಿಶ್ವಕಪ್​ನಲ್ಲಿ ನಂ. 1 ತಂಡವಾಗಿ ಕಣಕ್ಕಿಳಿಯುವ ಅವಕಾಶ ಸಿಗಲಿದೆ. ಆಸೀಸ್​ಗೆ ಈಗ ನಂ. 1 ಪಟ್ಟಕ್ಕೇರುವ ಅವಕಾಶ ಇಲ್ಲದಾಗಿದೆ. ಯಾಕೆಂದರೆ ಸರಣಿ ಕ್ಲೀನ್​ಸ್ವೀಪ್​ ಮಾಡಿದರೆ ಮಾತ್ರ ಆಸೀಸ್​ಗೆ ಅಗ್ರಪಟ್ಟ ಒಲಿಯುತ್ತಿತ್ತು. 2012ರಲ್ಲಿ ದಣ ಆಫ್ರಿಕಾ ಏಕಕಾಲದಲ್ಲಿ ಎಲ್ಲ 3 ಪ್ರಕಾರದಲ್ಲಿ ನಂ. 1 ರ್ಯಾಂಕ್​ಗೆ ಏರಿದ ಮೊದಲ ತಂಡವೆನಿಸಿದ್ದರೆ, ಭಾರತ ಈಗ ಆ ಸಾಧನೆಯನ್ನು ಸರಿಗಟ್ಟಿದೆ.

    ಇಂದೋರ್​ನಲ್ಲೂ ಮಳೆ ಭೀತಿ
    ಮಳೆ ಸದ್ಯಕ್ಕೆ ಟೀಮ್​ ಇಂಡಿಯಾದ ಬೆನ್ನುಬಿಡುವಂತೆ ಕಾಣಿಸುತ್ತಿಲ್ಲ. ಏಷ್ಯಾಕಪ್​ನಲ್ಲಿ ಕಾಡಿದ ಬಳಿಕ ಮೊಹಾಲಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆಯೂ ಮಳೆ ಕೆಲಕಾಲ ಅಡಚಣೆ ತಂದಿತ್ತು. ಇದೀಗ ಇಂದೋರ್​ನಲ್ಲೂ ಭಾನುವಾರ ಸಂಜೆಯ ವೇಳೆ ಮಳೆಯಾಗುವ ಭೀತಿ ಇದೆ. ಆದರೆ ಪಂದ್ಯ ರದ್ದಾಗುವ ಸಾಧ್ಯತೆ ಇಲ್ಲ.

    ಬ್ಯಾಟಿಂಗ್​ ಸ್ನೇಹಿ ಪಿಚ್​
    ಇಂದೋರ್​ನ ಹೋಳ್ಕರ್​ ಕ್ರೀಡಾಂಗಣ ಕಿರಿದಾದ ಬೌಂಡರಿ ಹೊಂದಿದ್ದು, ಈ ವರ್ಷ ಜನವರಿಯಲ್ಲಿ ಭಾರತ ಇಲ್ಲಿ ಕಿವೀಸ್​ ವಿರುದ್ಧ ಏಕದಿನ ಪಂದ್ಯ ಆಡಿದಾಗ ರೋಹಿತ್​ ಶರ್ಮ, ಶುಭಮಾನ್​ ಗಿಲ್​ ಶತಕ ಸಿಡಿಸಿದ್ದರು ಮತ್ತು ಭಾರತ 9 ವಿಕೆಟ್​ಗೆ 385 ರನ್​ ಪೇರಿಸಿತ್ತು. ಈ ಸಲವೂ ಅದೇ ರೀತಿ ರನ್​ಪ್ರವಾಹದ ನಿರೀಕ್ಷೆ ಇದೆ.

    ವಿಶ್ವಕಪ್​ನಿಂದ ಚಾಹಲ್​ ಹೊರಕ್ಕೆ, ಪತ್ನಿ ಧನಶ್ರೀಗೆ ಸಿಕ್ಕಿತು ಚಾನ್ಸ್​!

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts