More

    ವೈಜ್ಞಾನಿಕ ಚಿಕಿತ್ಸೆಯಿಂದ ಸಮಸ್ಯೆಗೆ ಸಿಕ್ಕಿತು ಮುಕ್ತಿ

    ವೈಜ್ಞಾನಿಕ ಚಿಕಿತ್ಸೆಯಿಂದ ಸಮಸ್ಯೆಗೆ ಸಿಕ್ಕಿತು ಮುಕ್ತಿಆತ 23 ರ ಚಿರಯುವಕ. ನೋಡಲು ಸುಂದರ ಹಾಗೂ ಲಕ್ಷಣವಾಗಿದ್ದಾನೆ. ಇತ್ತೀಚೆಗಷ್ಟೇ ಪದವಿ ಪೂರೈಸಿದ್ದಾನೆ. ಪಾಲಕರದು ಬ್ಯುಸಿನೆಸ್ ಇದೆ. ಮನೆ ಕಡೆ ಸ್ಥಿತಿವಂತರು. ಯಾವುದಕ್ಕೂ ಕೊರತೆ ಇಲ್ಲ. ಆದರೆ ಈಗ ಚಿಂತೆ ಎದುರಾಗಿರುವುದು ಈ ಯುವಕನದ್ದೇ.

    ಹೌದು. ಈ ಯುವಕ ಕೆಲ ದಿನಗಳಿಂದ ನಿಷ್ಕಿ›ಯನಾಗಿದ್ದಾನೆ. ಏಕಾಂಗಿಯಾಗಿ ಇರುತ್ತಾನೆ. ಕೆಲವೊಮ್ಮೆ ಆತಂಕಭರಿತನಾದರೆ ಇನ್ನು ಕೆಲವೊಮ್ಮೆ ಸುಮ್ಮನಿರುತ್ತಾನೆ. ಯಾರ ಜತೆಯೂ ಬೆರೆಯುವುದಿಲ್ಲ, ಮಾತನಾಡುವುದಿಲ್ಲ. ಈತನ ಈ ವರ್ತನೆ ಕುಟುಂಬದ ಸದಸ್ಯರ ನೆಮ್ಮದಿ ಹಾಳು ಮಾಡಿದೆ. ಮಗನ ಈ ನಡವಳಿಕೆಯಿಂದ ಪಾಲಕರಿಗೆ ಆತನ ಭವಿಷ್ಯದ ಬಗ್ಗೆ ಚಿಂತೆಯಾಗಿದೆ. ಇದು ಸಹಜವೇ. ಹಾಗಂತ ಸಕಾಲಕ್ಕೆ ಗುರುತಿಸಬೇಕು ಅಷ್ಟೇ.

    ಆದದ್ದಾದರೂ ಏನು?: ಏಕಾಂತ ಬಯಸುವುದು. ಸುಮ್ಮನೇ ಕೂರುವುದು. ದೇವರ ಕೆಂಗಣ್ಣಿಗೆ ಗುರಿಯಾಗುತ್ತೇನೆ ಎಂದು ಭಯ ಪಡುವುದು, ಸೂಜಿ ಅಥವಾ ಹರಿತವಾದ ವಸ್ತುಗಳನ್ನು ಕಂಡಾಗ ಅದರಿಂದ ಯಾರಿಗಾದರೂ ಏನಾದರೂ ಮಾಡಿಬಿಡುವೆನೋ ಎಂಬ ಭಯ ಆತನನ್ನು ಕಾಡುತ್ತಿತ್ತು. ಅನೇಕ ಸಾರಿ ತನ್ನ ಪಾಲಕರಿಗೆ ತಾನು ಯಾರಿಗಾದರೂ ಏನಾದರೂ ಮಾಡುವದಿಲ್ಲವಲ್ಲಾ ಎಂದು ಕೇಳುತ್ತಿದ್ದನು. ಇಲ್ಲವೇ ನಾನೆಲ್ಲಿ ಅವರ ಮೇಲೆ ಹಲ್ಲೆ ಮಾಡಿ ಬಿಡುವೆನೋ? ಹೀಗೆ ಹತ್ತು ಹಲವು ವಿಚಿತ್ರ ಹಾಗೂ ಅಸಹಜ ನಡವಳಿಕೆ ಆ ಯುವಕನದ್ದಾಗಿತ್ತು. ಇದನ್ನು ಕಂಡು ಆತನ ಸ್ನೇಹಿತರೂ ಈತನ ಬಳಿ ಬರುವುದನ್ನೇ ಬಿಟ್ಟರು. ಆತನ ಬಗ್ಗೆ ಇಡೀ ಊರಲ್ಲಿ ಅಪಪ್ರಚಾರ ಶುರುವಾಯಿತು. ಆ ಯುವಕನ ಮನಸ್ಥಿತಿ ಸರಿ ಇಲ್ವಂತೆ, ಹುಚ್ಚು ಹಿಡಿದಿದೆ ಎಂಬೆಲ್ಲಾ ಮಾತುಗಳು ಆರಂಭವಾದವು. ಇದು ಪಾಲಕರ ಗೌರವಕ್ಕೂ ಧಕ್ಕೆ ತರಲಾರಂಭಿಸಿತು.

    ಇದನ್ನು ಆತನ ಮನೆಯವರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಕ್ರಮೇಣ ಈ ತರಹದ ವರ್ತನೆ ಬಲವಾಗುತ್ತಾ ಹೋದಂತೆ ಅವರಿಗೂ ಇದೇನೋ ಬೇರೆಯೇ ಇದೆ ಎಂದು ಅನಿಸತೊಡಗಿತು. ಆಪ್ತ ಸಂಬಂಧಿಕರಲ್ಲಿ ವಿಷಯ ಪ್ರಸ್ತಾಪಿಸಿ ರ್ಚಚಿಸಿದರು. ಮುಂದೇನು ಎಂದು ಆಲೋಚಿಸುತ್ತಿರುವಾಗ ಸಂಬಂಧಿಕರಲ್ಲೊಬ್ಬರು ಮನೋವೈದ್ಯರನ್ನು ಸಂರ್ಪಸಲು ಸೂಚಿಸಿದರು. ನಂತರ ನನ್ನ ಬಳಿ ಕರೆದುಕೊಂಡು ಬಂದರು.

    ವೈಜ್ಞಾನಿಕ ಚಿಕಿತ್ಸೆ: ಈ ಯುವಕನ ವರ್ತನೆ ಮನೋರೋಗದ ಒಂದು ಪ್ರಕಾರ. ಈ ತರಹದ ವರ್ತನೆಗಳು ಗೀಳುರೋಗದ ಲಕ್ಷಣಗಳಾಗಿವೆ. ಅನೇಕ ರೋಗಿಗಳು ಕೇಳುವದುಂಟು : ನಾನು ಯಾರಿಗೂ ಏನೂ ಮಾಡಿಲ್ಲ, ಯಾವುದೇ ತರಹದ ತಪ್ಪುಕೂಡಾ ಮಾಡಿಲ್ಲ, ನನಗೆ ಯಾಕೆ ಈ ತರಹವಾಗುತ್ತದೆ?. ಈ ತರಹದ ರೋಗಿಯ ವರ್ತನೆ ಭಿನ್ನವಾಗಿರುತ್ತದೆ. ಇದನ್ನು ಪತ್ತೆ ಹಚ್ಚಲು ಕೂಡ ಸೂಕ್ಷ್ಮ ಗ್ರಹಿಕೆ ಬೇಕು. ಮನೋವೈದ್ಯರ ಬಳಿ ಕರೆದುಕೊಂಡು ಹೋಗಬೇಕು. ಕೌನ್ಸೆಲಿಂಗ್ ಮಾಡಿಸಬೇಕು. ಈ ವೇಳೆ ಈತನ ಎಲ್ಲ ವಾಸ್ತವ ಅಂಶಗಳು ಬಹಿರಂಗವಾಗುತ್ತವೆ. ಆ ಮೇಲೆಯಷ್ಟೇ ಅಗತ್ಯ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಈ ಯುವಕನ ವಿಷಯದಲ್ಲಿ ಆದದ್ದೂ ಅದೇ. ಆಪ್ತ ಸಮಾಲೋಚನೆ ವೇಳೆ ಈ ಯುವಕ ತಾನು ಎದುರಿಸುತ್ತಿರುವ ಸಮಸ್ಯೆಯನ್ನು ಸವಿಸ್ತಾರವಾಗಿ ವಿವರಿಸಿದ. ಅದಕ್ಕೆ ತಕ್ಕಂತೆ ನಾನು ಕೆಲ ಮಾತ್ರೆಗಳನ್ನು ಸೂಚಿಸಿದೆ. ಆದರೆ ಇವುಗಳನ್ನು ತೆಗೆದುಕೊಳ್ಳಲು ಆರಂಭಿಸಿದ ನಂತರವೂ ಸಮಸ್ಯೆ ಪರಿಹಾರವಾಗುವ ಲಕ್ಷಣ ಕಾಣಲಿಲ್ಲ. ಮತ್ತೊಮ್ಮೆ ವಿಚಾರಿಸಿ ವಿದ್ಯುತ್ ಸಂಪರ್ಕ ಚಿಕಿತ್ಸೆ ನೀಡಲು ನಿರ್ಧರಿಸಿದೆ. ಅದರನ್ವಯ ಒಂದು ದಿನ ಬೆಳಗ್ಗೆ ಈ ಚಿಕಿತ್ಸೆ ನೀಡಲಾಯಿತು. ಪರಿಣಾಮ ಆತನ ತಲೆಯಲ್ಲಿ ಬರುತ್ತಿದ್ದ ಆತ್ಮಹತ್ಯೆಯಂತಹ ನಕಾರಾತ್ಮಕ ಆಲೋಚನೆಗಳು ದೂರಾದವು. ಧೈರ್ಯ ಬಂದಿತು. ಜೀವನೋತ್ಸಾಹ ಆತನಲ್ಲಿ ಪುಟಿದೆದ್ದಿತು. ಎಲ್ಲರೊಂದಿಗೆ ಬೆರೆಯಲಾರಂಭಿಸಿದ, ಮಾತನಾಡಲು ಶುರು ಮಾಡಿದ. ದುಡಿಮೆಯ ತವಕ ಕಾಣಲಾರಂಭಿಸಿತು. ಇದೆಲ್ಲದರ ಪರಿಣಾಮ ಆತನ ಇಡೀ ಕುಟುಂಬ ಸಂತಸದ ಹೊನಲಲ್ಲಿ ತೇಲಲಾರಂಭಿಸಿತು.

    ಇಲ್ಲಿ ಈ ಯುವಕ ನೆಪ ಮಾತ್ರ. ಅನೇಕ ಕುಟುಂಬಗಳಲ್ಲಿ ಈ ತರಹದ ಯುವಕರು ಇರಬಹುದು. ಮನೋರೋಗವೂ ಭಿನ್ನವಾಗಿರಬಹುದು. ಈ ಮಾದರಿ ಸಮಸ್ಯೆ ಎದುರಾದಾಗ ಸಮೀಪದ ಮನೋವೈದ್ಯರ ಬಳಿ ಹೋಗಬೇಕು. ಅಲ್ಲಿರುವ ಅಪ್ತ ಸಮಾಲೋ ಚಕರ ಬಳಿ ನಿಜ ಸಂಗತಿ ಹೇಳಬೇಕು. ತಾತ್ಪರ್ಯ ಇಷ್ಟೇ. ಈ ಯುವಕನಿಗೆ ಎದುರಾದ ಸಮಸ್ಯೆ ಪರಿಹರಿಸಲಾರದಂಥದ್ದೇನಲ್ಲ. ಸಕಾಲಕ್ಕೆ ಮನೋವೈದ್ಯರನ್ನು ಸಂರ್ಪಸಿದರೆ ಪರಿಹಾರ ಸುಲಭ. ಅದು ಬಿಟ್ಟು ಮೌಢ್ಯಗಳ ಆಚರಣೆಗೆ ಮುಂದಾಗಬಾರದು. ಕಾಲ ಬದಲಾಗಿದೆ. ಅನೇಕ ವೈಜ್ಞಾನಿಕ ಚಿಕಿತ್ಸಾ ಕ್ರಮಗಳು ಬಂದಿವೆ. ಎಲ್ಲದಕ್ಕೂ ಪರಿಹಾರ ಕ್ರಮವಿದೆ.

    12 ವರ್ಷಗಳಿಂದ ಇನ್ಶೂರೆನ್ಸ್ ಇಲ್ಲದ ವಾಹನದಲ್ಲಿ ಪೊಲೀಸರ ಡ್ಯೂಟಿ; ಸ್ಥಳೀಯ ವ್ಯಕ್ತಿ ಅಧಿಕಾರಿಯನ್ನೇ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ!

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts